ಬಳ್ಳಾರಿ: ತಾಲ್ಲೂಕಿನ ಹಲಕುಂದಿ ಗ್ರಾಮದ ಬಳಿಯ ಅಕ್ಕಿ ಗಿರಣಿಯೊಂದರ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಬ್ಬಂದಿ ಶನಿವಾರ ರಾತ್ರಿ ಮಿಂಚಿನ ದಾಳಿ ನಡೆಸಿ ಅಕ್ರಮ ಸಂಗ್ರಹ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಬಾಲಾಜಿ ಅಗ್ರೋ ಇಂಡಸ್ಟ್ರೀಸ್ ಎಂಬ ಅಕ್ಕಿ ಗಿರಣಿಯ ಮೇಲೆ ದಾಳಿ ನಡೆಸಿ ಸಾರ್ವಜನಿಕ ವಿತರಣೆಗಾಗಿ ಸರಬರಾಜು ಮಾಡಲು ಬಿಡುಗಡೆ ಮಾಡಲಾಗಿದ್ದ ಅಂದಾಜು 24 ಲಕ್ಷ ರೂ. ಮೌಲ್ಯದ 2519 ಕ್ವಿಂಟಲ್ ಅಕ್ಕಿಯನ್ನು ಇಲಾಖೆಯ ಉಪ ನಿರ್ದೇಶಕ ಬಿ.ಟಿ. ಮಂಜುನಾಥ ಮತ್ತಿತರರು ವಶಕ್ಕೆ ತೆಗೆದುಕೊಂಡಿದ್ದಾರೆ.
ಗಿರಣಿಯಲ್ಲಿ ಈ ಅಕ್ಕಿಯನ್ನು ಪಾಲಿಶ್ ಮಾಡಿಸಿ, ಅಧಿಕ ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಲಾಗಿತ್ತು ಎಂದು ಮಂಜುನಾಥ ತಿಳಿಸಿದ್ದಾರೆ.
ಅಕ್ಕಿ ಗಿರಣಿಯ ಮಾಲೀಕ ಹೊಸಪೇಟೆ ಮೂಲದ ವೆಂಕೋಬಶೆಟ್ಟಿ ಎಂಬುವವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ ಕ್ಯಾತನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿಲಿಂಡರ್ ಜಪ್ತಿ: ಆಟೋರಿಕ್ಷಾಗಳಿಗೆ ಅಕ್ರಮವಾಗಿ ಅಳವಡಿಸಲಾಗಿದ್ದ 31 ಗೃಹಬಳಕೆ ಅಡುಗೆ ಅನಿಲ್ ಸಿಲಿಂಡರ್ಗಳನ್ನು ಭಾನುವಾರ ವಶಪಡಿಸಿಕೊಂಡಿರುವ ಆಹಾರ ಇಲಾಖೆ ಸಿಬ್ಬಂದಿ ಈ ಕುರಿತು ಸಂಚಾರ ವಿಭಾಗದ ಪೊಲೀಸ್ ಠಾಗೆ ದೂರು ನೀಡಿದ್ದಾರೆ.
ಅಲ್ಲದೆ ನಗರದ ಮಿಲ್ಲರ್ ಪೇಟೆಯಲ್ಲಿ ಮನೆಯೊಂದರಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ 20 ಅಡುಗೆ ಅನಿಲ ಸಿಲಿಂಡರ್ಗಳನ್ನು ಜಪ್ತಿ ಮಾಡಲಾಗಿದೆ. ಈ ಬಗ್ಗೆ ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.