ಚಿಕ್ಕಮಗಳೂರು: ಸಮೀಪದ ಮಲ್ಲೇನಹಳ್ಳಿ ಸುತ್ತಲ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಗಳ ಮಹಿಳೆಯರು ಸೋಮವಾರ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಅಕ್ರಮ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕುವಂತೆ ಘೋಷಣೆ ಹಾಕಿದ ಮಹಿಳೆಯರು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಆದಷ್ಟು ಶೀಘ್ರ ಅಕ್ರಮ ಮದ್ಯ ಮಾರಾಟ ದಂಧೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಮಲ್ಲೇನಹಳ್ಳಿ, ಕುಮಾರಗಿರಿ, ಹೂವೇನಹಳ್ಳಿ, ಕಾಮೇನಹಳ್ಳಿ, ಹೊಸೂರು ಸೇರಿದಂತೆ ಸುತ್ತಲ ಹಳ್ಳಿಗಳಲ್ಲಿ ಮದ್ಯ ಮಾರಾಟಗಾರರು ಮನೆ ಮನೆಗೇ ಬಂದು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಈ ಗ್ರಾಮಗಳ ಬಹುತೇಕ ಎಲ್ಲ ಮನೆಗಳಲ್ಲಿನ ದುಡಿಯುವ ಪುರುಷರೆಲ್ಲ ಕುಡಿತಕ್ಕೆ ದಾಸರಾಗಿ ಹೋಗಿದ್ದಾರೆ. ಕುಡಿದ ಅಮಲಿನಲ್ಲಿ ಮನೆಯ ಹೆಂಗಸರನ್ನು ಹಿಡಿದು ಬಡಿಯುತ್ತಿದ್ದಾರೆ. ಮಕ್ಕಳಿಗೂ ಕಿರುಕುಳ ಹೆಚ್ಚುತ್ತಿದೆ ಎಂದು ಮಹಿಳೆಯರು ಅಲವತ್ತುಕೊಂಡರು.
ಮದ್ಯ ಮಾರುವವರನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ. ಕೂಲಿ ಹಣವೆಲ್ಲ ಕುಡಿತಕ್ಕೆ ಹೋಗುತ್ತಿದ್ದು, ಸಂಸಾರ ನಿರ್ವಹಣೆಯೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಹೆಚ್ಚುವರಿ ಜಿಲ್ಲಾಧಿಕಾರಿ ಮನವಿಪತ್ರ ಸ್ವೀಕರಿಸಿದರು.
ಮೀನಾಕ್ಷಿ, ಮಮತಾ, ಪುಟ್ಟಮ್ಮ, ಚಂದ್ರಮ್ಮ, ಲಕ್ಕಮ್ಮ ಧರಣಿ ನೇತೃತ್ವ ವಹಿಸಿದ್ದರು.