ಶಹಾಪುರ: ತಾಲ್ಲೂಕಿನ ಕೃಷ್ಣಾ ನದಿ ತಟದ ಗ್ರಾಮಗಳಾದ ಹೈಯ್ಯಾಳ, ಯಕ್ಷಿಂತಿ, ಗೌಡೂರ, ಕೊಳ್ಳೂರ ಮುಂತಾದ ಗ್ರಾಮದ ಬಳಿ ಹೊಲದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಸಂಗ್ರಹಿಸಿಟ್ಟಿರುವ ಮಾಲಿಕರ ವಿರುದ್ಧ ನೋಟಿಸು ನೀಡಿದರೆ ಸಾಲದು ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಜೆಡಿಎಸ್ ಜಿಲ್ಲಾ ಎಸ್ಸಿ ಘಟಕದ ಉಪಾಧ್ಯಕ್ಷ ಶರಣುರಡ್ಡಿ ಆಗ್ರಹಿಸಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿ ಅಕ್ರಮ ಮರಳು ಸಂಗ್ರಹದಲ್ಲಿ ಶಾಮೀಲಾಗಿ ರಕ್ಷಣೆಗೆ ನಿಂತಿದ್ದಾರೆ. ಮೇಲಾಧಿಕಾರಿಗಳಿಗೆ ವರದಿ, ಮುಂದಿನ ಕ್ರಮ ಹೀಗೆ ಇಲ್ಲದ ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಎಫ್.ಆರ್.ಜಮದಾರ ಅವರಿಗೆ ಮರಳು ದಾಸ್ತಾನ ಸಂಗ್ರಹದ ಬಗ್ಗೆ ಗಮನಕ್ಕೆ ಬಂದರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಕ್ರಮ ಮರಳು ಸಾಗಾಟದ ಬಗ್ಗೆ ತನಿಖಾ ತಂಡ ರಚಿಸಲಾಗಿದೆ ಎನ್ನುತ್ತಲೆ ವರ್ಷ ಸವೆಸಿದ್ದಾರೆ. ಮೇಲಾಧಿಕಾರಿಗಳ ಕ್ರಮವನ್ನು ಗುಮಾನಿಯಿಂದ ಜನತೆ ನೋಡುವಂತಾಗಿದೆ ಎಂದು ಶರಣು ತಿಳಿಸಿದ್ದಾರೆ.
ಹೈಯ್ಯಾಳ ಹೋಬಳಿ ವ್ಯಾಪ್ತಿಯ ಕಂದಾಯ ನಿರೀಕ್ಷಕರು ಅಗಸ್ಟ್ 30ರಂದು ಸಹಾಯಕ ಆಯುಕ್ತರಿಗೆ ಅಕ್ರಮ ಮರಳು ದಾಸ್ತಾನು ಮಾಡಿದ ಸರ್ವೇನಂಬರ್ನ ಮಾಲೀಕರ ಹೆಸರುಗಳನ್ನು ವರದಿಯಲ್ಲಿ ಸಲ್ಲಿಸಿದ್ದಾರೆ. ಇಂದಿಗೂ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ದೂರಿದ್ದಾರೆ.