ಶಿರಸಂಗಿ: ಬೆಳಗಾವಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರವೀಣ ಕುಮಾರ ಹಾಗೂ ಸವದತ್ತಿ ತಹಸೀಲ್ದಾರರಾದ ಶಾರದಾ ಕೋಲಕಾರ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಹಳ್ಳ ಪ್ರದೇಶದಲ್ಲಿ ದಾಳಿ ನಡೆಸಿ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ 10 ದೋಣಿ ಸಹಿತ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಮರಳು ಸಾಗಿಸಲು ಬಂದಿದ್ದ ಆರು ಲಾರಿಗಳಿಗೆ 60 ಸಾವಿರ ದಂಡ ವಿಧಿಸಿದರು.
ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಸೋಮವಾರ ಮಧ್ಯಾಹ್ನ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ರೈತರು ಅಕ್ರಮ ಮರಳುಗಾರಿಕೆಯಿಂದ ಆಗುತ್ತಿ ರುವ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು.
`ಮರಳು ಸಾಗಿಸುವ ವಾಹನ ಗಳಿಂದಾಗಿ ರೈತರಿಗೆ ಸಮಸ್ಯೆಯಾಗಿದೆ. ಈ ಕುರಿತು ಮರಳೆತ್ತುವ ಮಾಲೀಕರಿಗೆ ಹೇಳಿದರೆ ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ~ ಎಂದು ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಅನಧಿಕೃತ ಮರಳು ಎತ್ತುವ ಕೆಲಸ ಮುಂದುವರಿದರೆ ಮತ್ತೆ ದಾಳಿ ಮಾಡಿ ಸಂಭಂಧಪಟ್ಟವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರವೀಣ ಕುಮಾರ ಹೇಳಿದರು.
ದಾಳಿ ಇದೇ ಮೊದಲನೆಯದಲ್ಲ, ಇಂತಹ ದಾಳಿಗಳು ಸಾಕಷ್ಟು ಬಾರಿ ನಡೆದಿವೆ. ದಾಳಿ ನಡೆದ ಮರುದಿನವೇ ಮರಳು ಎತ್ತುವ ಕೆಲಸ ಮತ್ತೆ ಪ್ರಾರಂಭವಾಗುತ್ತದೆ. ಇದರ ಬಗ್ಗೆ ತಹಸೀಲ್ದಾ ರರಿಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿಸಿದರು.