ಚನ್ನರಾಯಪಟ್ಟಣ: ಪುರಸಭಾ ವ್ಯಾಪ್ತಿಯಲ್ಲಿನ ಅಕ್ರಮ ಮಳಿಗೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪುರಸಭೆಗೆ ನೋಟಿಸ್ ನೀಡಲಾಗಿದೆ. ಪುರಸಭೆ ಕ್ರಮ ಕೈಗೊಳ್ಳಲು ಮುಂದಾಗದಿದ್ದರೆ 15 ದಿನದಲ್ಲಿ ಜಿಲ್ಲಾಧಿಕಾರಿ ಕಚೇರಿ ವತಿ ಯಿಂದ ವಿಶೇಷ ಅಧಿ ಕಾರಿ ನೇಮಿಸಿ ಕ್ರಮ ಕೈ ಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಶುಕ್ರವಾರ ಇಲ್ಲಿ ತಿಳಿಸಿದರು.
ಪುರಸಭೆಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆ ಅನುಮತಿ ಇಲ್ಲದೆ ಮಳಿಗೆಗಳನ್ನು ನವೀಕರಣ, ವಿಸ್ತರಣೆ ಮಾಡಿರಬಾರದು, ಒಳ ಬಾಡಿಗೆ ನೀಡಿರಬಾರದು ಹಾಗೂ ಸಕಾಲಕ್ಕೆ ಕಂದಾಯ ಪಾವತಿಸಿದ ಮಳಿಗೆಗಳನ್ನು ಮುಂದುವರೆಸಲಾಗುವುದು. ನಿಯಮ ಉಲ್ಲಂಘಿಸಿದ್ದರೆ ಮಳಿಗೆಗಳನ್ನು ಹೊಸದಾಗಿ ಹರಾಜು ಹಾಕಲಾಗುವುದು ಎಂದು ಅವರು ಹೇಳಿದರು.
ಪುರಸಭೆಗೆ ಸೇರಿದ ವಸತಿಗೃಹದ ಜಾಗದಲ್ಲಿ ಅಕ್ರಮವಾಗಿ ನಿವೃತ್ತ ನೌಕರರೊಬ್ಬರು ಮನೆ ನಿರ್ಮಿಸಿಕೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು, ಮನೆಯನ್ನು ಕೂಡಲೇ ತೆರವುಗೊಳಿಸಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.
ಈ ಬಗ್ಗೆ ನೋಟಿಸ್ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಉತ್ತರ ನೀಡುತ್ತಿದ್ದಂತೆ, ಇದನ್ನು ಒಪ್ಪದ ಜಿಲ್ಲಾಧಿಕಾರಿ, ಪುರಸಭೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವರ ವಿರುದ್ಧ ನೋಟಿಸ್ ನೀಡುವ ಅಗತ್ಯವಿಲ್ಲ. ಕೂಡಲೇ ತೆರವುಗೊಳಿಸಬೇಕು. ನಿವೃತ್ತ ನೌಕರನ ಈ ಕ್ರಮ ಸರಿಯಲ್ಲ. ನಿವೃತ್ತ ವೇತನ ಬಾರದಂತೆ ಸಂಬಂಧಿಸಿದವರಿಗೆ ಪತ್ರ ಬರೆಯಿರಿ ಎಂದು ಸಲಹೆ ನೀಡಿದರು.
ಪುರಸಭಾಧ್ಯಕ್ಷೆ ಅನುಸೂಯ ಪ್ರಕಾಶ್, ಯೋಜನಾ ನಿರ್ದೇಶಕ ಚಂದ್ರಶೇಖರ್, ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ, ಮುಖ್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್ ಹಾಜರಿದ್ದರು.
ಅಕ್ರಮ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಮನಿರ್ದೇಶನ ಸದಸ್ಯ ನಂಜುಂಡ ಮೈಮ್, ಜಿಲ್ಲಾಧಿಕಾರಿಗೆ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.