ಬೆಂಗಳೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳ ಸಕ್ರಮಕ್ಕೆ ಶೇ 5ರಿಂದ 20ರ ವರೆಗೆ ದಂಡ ವಿಧಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು. ಅಕ್ರಮ ಮನೆಗಳ ಸಕ್ರಮಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 94(ಸಿ)ಗೆ ತಿದ್ದುಪಡಿ ತರಲಾಗಿತ್ತು. ಈಗ ದಂಡದ ಪ್ರಮಾಣವನ್ನು ನಿಗದಿಪಡಿಸಲಾಗಿದೆ (ಬಾಕ್ಸ್ ನೋಡಿ).
ನಿಯಮಾವಳಿಗಳನ್ನು ರೂಪಿಸಿದ ನಂತರ ಸಕ್ರಮದ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.
ಬಿ.ಇಡಿಗೆ ಅವಕಾಶ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 1,349 ಉಪನ್ಯಾಸಕರಿಗೆ ಬಿ.ಇಡಿ ವ್ಯಾಸಂಗಕ್ಕೆ ವೇತನ ಸಹಿತ ರಜೆ ನೀಡಲು ಹಾಗೂ ಅವರ ಜಾಗಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
ರಾಜ್ಯದ ನಾಗರಿಕ ಸೇವೆಗಳ ಸಮೂಹ ‘ಎ’ ಶ್ರೇಣಿ (ಕೆಎಎಸ್ ಮತ್ತಿತರ) ಅಧಿಕಾರಿಗಳಿಗೆ ಮನೆ ನಿರ್ಮಾಣಕ್ಕಾಗಿ ₨ 25 ಲಕ್ಷ ಮುಂಗಡ ಹಣ ನೀಡಲು ಒಪ್ಪಿಗೆ ನೀಡಲಾಗಿದೆ. ಇದುವರೆಗೆ ಐಎಎಸ್ ಅಧಿಕಾರಿಗಳಿಗೆ ಮಾತ್ರ ₨ 25 ಲಕ್ಷ ನೀಡಲಾಗುತ್ತಿತ್ತು.
ಅಕ್ಕಿ ಇಳಿಕೆ, ಗೋಧಿ ಏರಿಕೆ
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಪ್ರಮಾಣ ಕಡಿಮೆ ಮಾಡಿ ಅಷ್ಟೇ ಪ್ರಮಾಣದಲ್ಲಿ ಹೆಚ್ಚು ಗೋಧಿ ನೀಡಲಾಗುತ್ತದೆ.
ಉತ್ತರ ಕರ್ನಾಟಕದಲ್ಲಿ ಕುಟುಂಬದ ಸದಸ್ಯರನ್ನು ಆಧರಿಸಿ ನೀಡಲಾಗುತ್ತಿದ್ದ 2,3,5 ಕೆ.ಜಿ ಗೋಧಿ ಪ್ರಮಾಣವು ಈಗ 4,6,10 ಕೆ.ಜಿ ಗಳಷ್ಟಾಗುತ್ತದೆ. ದ.ಕ ಭಾಗದಲ್ಲಿ 1,2,3 ಕೆ.ಜಿ. ಗೋಧಿ ಬದಲಾಗಿ, ಇನ್ನು ಮುಂದೆ ಕ್ರಮವಾಗಿ 2,4,6 ಕೆ.ಜಿ. ಗೋಧಿ ನೀಡಲಾಗುತ್ತದೆ .
₨ 2 ಪ್ರೋತ್ಸಾಹ ಧನ
ಸರ್ಕಾರಿ ಶಾಲೆಗಳ ಒಂದನೇ ತರಗತಿ ಹುಡುಗಿಯರಿಗೆ ಪ್ರತಿದಿನದ ಹಾಜರಾತಿಗೆ ₨ 2 ಪ್ರೋತ್ಸಾಹಧನ ನೀಡುವ ಯೋಜನೆಯನ್ನು 2014 ಜನವರಿ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ತರಲಾಗುತ್ತದೆ.