ನೆಲಮಂಗಲ: ಪಟ್ಟಣದ ತುಮಕೂರು-ನೆಲಮಂಗಲ ಟೋಲ್ ಬಳಿ ಮೂರು ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ1.81 ಕೋಟಿ ನಗದನ್ನು ವಶಪಡಿಸಿಕೊಂಡ ಚುನಾವಣಾ ಸಂಚಾರಿ ಜಾಗೃತಾ ದಳದ ಸಿಬ್ಬಂದಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಶನಿವಾರ ಬೆಳಿಗ್ಗೆ 10.45ರ ವೇಳೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ನೆಲಮಂಗಲ-ತುಮಕೂರು ಟೋಲ್ ಬಳಿ ಸಂಚಾರಿ ಜಾಗೃತ ದಳದ ಸಿಬ್ಬಂದಿ ಗ್ರಾಮಾಂತರ ಠಾಣೆಯ ಸಿಬ್ಬಂದಿಯೊಂದಿಗೆ ವಾಹನಗಳ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ 2 ಟಾಟಾ ಸುಮೋ ಮತ್ತು ಮಾರುತಿ ಸ್ವಿಫ್ಟ್ ಡಿಸೈರ್ ಕಾರನ್ನು ತಪಾಸಣೆ ನಡೆಸಲಾಯಿತು. ಕಾರಿನಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ರೂ1,81 ಕೋಟಿ ನಗದು ಪತ್ತೆಯಾಯಿತು. ವಿಚಾರಣೆ ವೇಳೆಗೆ ವಾಹನದಲ್ಲಿದ್ದವರು ದ್ವಂದ್ವ ಹೇಳಿಕೆ ನೀಡಿದ್ದರಿಂದ ಅನುಮಾನಗೊಂಡ ಜಾಗೃತಾ ದಳದ ಸಿಬ್ಬಂದಿ ಸಹಾಯಕ ಚುನಾವಣಾಧಿಕಾರಿಗೆ ಸುದ್ದಿ ಮುಟ್ಟಿಸಿದರು.
ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿ ಆರ್. ಅನಿಲ್ ಕುಮಾರ್ ಮತ್ತು ಗ್ರಾಮಾಂತರ ಠಾಣೆಯ ಎಂ.ಬಿ.ನವೀನ್ ಕುಮಾರ್ ಪರಿಶೀಲಿಸಿದರು. ಹಣದ ಬಗ್ಗೆ ಯಾವುದೇ ದಾಖಲೆಗಳಿಲ್ಲದ ಕಾರಣ 8 ಆರೋಪಿಗಳನ್ನು ಬಂಧಿಸಿ ವಾಹನಗಳು ಮತ್ತು ನಗದನ್ನು ಮುಟ್ಟುಗೋಲು ಹಾಕಿಕೊಂಡರು.
ಹೆಜ್ಜೇನು ದಾಳಿ- 50 ಮಂದಿಗೆ ಗಾಯ: ಶನಿವಾರ ನಿಧನರಾದ ಮೈಲನಹಳ್ಳಿ ಕುಮಾರ್ ಅವರ ಶವಸಂಸ್ಕಾರದ ವೇಳೆ 50ಕ್ಕೂಹೆಚ್ಚು ಜನರಿಗೆ ಹೆಜ್ಜೇನು ಕಚ್ಚಿದ್ದು, ಐವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಯಲಮ್ಮ (35), ಸಿದ್ದಪ್ಪ(27), ಕೃಷ್ಣಮೂರ್ತಿ(57), ಅಶೋಕ್(28), ಲಕ್ಷ್ಮಣ್(28) ಎಂದು ಗುರುತಿಸಲಾಗಿದೆ.
ಗ್ರಾಮದ ರೇಣುಕ ಯಲ್ಲಮ್ಮ ದೇವಿ ದೇವಾಲಯದ ಮುಂಭಾಗದಲ್ಲಿ ಶವಯಾತ್ರೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.