ನಾಪೋಕ್ಲು: ಇಲ್ಲಿಗೆ ಸಮೀಪದ ಚೆರಿಯಪರಂಬು ಗ್ರಾಮದ ರಸ್ತೆ ಬದಿಯ ಪೈಸಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ನೂರಕ್ಕೂ ಹೆಚ್ಚು ಗುಡಿಸಲುಗಳನ್ನು ಕಂದಾಯ ಇಲಾಖೆ ಸಿಬ್ಬಂದಿ ಗುರುವಾರ ತೆರವುಗೊಳಿಸಿದರು.
ನಿವೇಶನ ರಹಿತ ನೂರಾರು ಕುಟುಂಬಗಳು ರಸ್ತೆ ಬದಿ ಗುಡಿಸಲು ಕಟ್ಟಿಕೊಂಡು ಕೆಲ ವರ್ಷಗಳಿಂದ ವಾಸಿಸುತ್ತಿದ್ದವು. ಆದರೆ, ಈ ಜಾಗ ಗ್ರಾ. ಪಂ.ಗೆ ಸೇರಿದ್ದರಿಂದ ಅಲ್ಲಿನ ಎಲ್ಲ ಗುಡಿಸಲುಗಳನ್ನು ತೆರವುಗೊಳಿಸುವಂತೆ ತಾಕೀತು ಮಾಡಲಾಗಿತ್ತು. ಮಡಿಕೇರಿ ತಹಶೀಲ್ದಾರ್ ವಾಸುದೇವಾಚಾರ್ ಅವರು ಗುರುವಾರ ಬೆಳಿಗ್ಗೆ ಸ್ಥಳ ಪರಿಶೀಲನೆ ನಡೆಸಿದರು. ಎಲ್ಲ ಗುಡಿಸಲುಗಳು ಅಕ್ರಮವಾಗಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದರು.
ಈ ಸಂದರ್ಭದಲ್ಲಿ ಗುಡಿಸಲು ನಿವಾಸಿಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ವಾಸುದೇವಾಚಾರ್ಯ, ನಿವೇಶನ ಅಗತ್ಯ ಇದ್ದವರು ಕಾನೂನು ಪ್ರಕಾರ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು. ಅದನ್ನು ಸರ್ಕಾರಕ್ಕೆ ಸಲ್ಲಿಸಿ, ಸರ್ಕಾರದ ನಿರ್ದೇಶನದಂತೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿ ನಿಗದಿಪಡಿಸಿದ ಸ್ಥಳದಲ್ಲಿ ಮನೆ, ನಿವೇಶನ ಮಂಜೂರು ಮಾಡಲಾಗುವುದು. ಯಾವುದೇ ಸ್ಥಳದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಬಾರದು. ಮುಂದೆ ಈ ರೀತಿ ಮನೆ ನಿರ್ಮಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಯಂ. ಸಲೀಂ ಹಾರಿಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಪಿಎಸ್ಐ ಷಣ್ಮುಗಂ, ಕಂದಾಯ ನಿರೀಕ್ಷಕ ವಿಠಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಕೇಟೋಳಿರ ಹರೀಶ್ ಪೂವಯ್ಯ, ಅಪ್ಪನೆರವಂಡ ಕಿರಣ್ ಕಾರ್ಯಪ್ಪ, ಕುಲ್ಲೆೀಟಿರ ಅರುಣ್ ಬೇಬ, ಚಿಯಕಪೂವಂಡ ಮುತ್ತುರಾಣಿ ಅಚ್ಚಪ್ಪ. ಬಿಜೆಪಿ ಮುಖಂಡರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಪಾಡಿಯಮ್ಮಂಡ ಮನು, ಕಂಗಾಂಡ ಜಾಲಿ ಪೂವಯ್ಯ, ಗ್ರಾಮ ಲೆಕ್ಕಾಧಿಕಾರಿ ಉಷಾ ಮತ್ತಿತರರು ಇದ್ದರು.