ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ತೇರಿಗೆ ಅದ್ದೂರಿ ಸ್ವಾಗತ

Last Updated 1 ಜೂನ್ 2013, 10:16 IST
ಅಕ್ಷರ ಗಾತ್ರ

ಆಲಮಟ್ಟಿ: ಕನ್ನಡ ವರ್ಣಮಾಲೆಗಳ ಜಯಘೋಷ, ಅಕ್ಷರ ತೇರಿನ ಸಡಗರ ಸಂಭ್ರಮ, ರಂಗೋಲಿಯ ಚಿತ್ತಾರ, ಜನಪದ ಕಲೆಗಳ ಅನಾವರಣ, ಶಿಕ್ಷಣ ಪ್ರೇಮಿಗಳ ಅಪೂರ್ವ ಸಂಗಮ......!

ಇದು ಶುಕ್ರವಾರ ಬೆಳಿಗ್ಗೆ ನಿಡಗುಂದಿ ಪಟ್ಟಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಡಗುಂದಿ ವಲಯದ ಶಾಲಾ ಆರಂಭೋತ್ಸವದ ಅಂಗವಾಗಿ ಜರುಗಿದ ಅಕ್ಷರ ತೇರಿನ ಮೆರವಣಿಗೆಯಲ್ಲಿ ಕಂಡು ಕೇಳಿ ಬಂದ ದೃಶ್ಯಾವಳಿಗಳಿವು.

ಕನ್ನಡ ವರ್ಣಮಾಲೆಗಳಿಂದ ರಚಿಸಿದ್ದ ಅಕ್ಷರ ಮಾಲೆಗಳನ್ನು ಅಳವಡಿಸಿದ ಬಿಂದಿಗೆಯನ್ನು ಹೊತ್ತ ವಿದ್ಯಾರ್ಥಿನಿಯರು ಥೇಟ್ ಸುಮಂಗಲೆಯರು ಪೂರ್ಣಕುಂಭ ಹೊತ್ತಂತೆ ಭಾಸವಾಗುತ್ತಿತ್ತು.

ವಿವಿಧ ರಾಷ್ಟ್ರ ನಾಯಕರ ವೇಷ ಧರಿಸಿದ್ದ ಚಿಣ್ಣರು ಎಲ್ಲರ ಮನ ಗೆದ್ದರು, ಮುಂದೆ ಡೊಳ್ಳಿನ ನಿನಾದ, ಅದರ ಹಿಂದೆ ಅಕ್ಷರ ತೇರು ಎಲ್ಲರ ಗಮನ ಸೆಳೆಯಿತು.

ಶಾಲಾ ಆರಂಭೋತ್ಸವದಲ್ಲಿ ರಚಿಸಲಾಗಿದ್ದ ಅಕ್ಷರ ತೇರನ್ನು ಟ್ರ್ಯಾಕ್ಟರ್‌ನಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಯುದ್ದಕ್ಕೂ ಚಿಣ್ಣರು, ಪಟ್ಟಣದ ಗಣ್ಯರು, ಜನಪ್ರತಿನಿಧಿಗಳು, ವಿವಿಧ ಶಾಲೆಯ ಶಿಕ್ಷಕರು ನೆರೆದಿದ್ದರು.

ಮಣಗೂರ, ಕಮದಾಳ ಪುನರ್ವಸತಿ ಕೇಂದ್ರದ ಮೂಲಕ ಹಾಯ್ದು ನಿಡಗುಂದಿಯ ಪ್ರಮುಖ ಪಟ್ಟಣಗಳಲ್ಲಿ ತೆರಳಿದ ಅಕ್ಷರ ತೇರು ಸಾರ್ವಜನಿಕರ ಗಮನ ಸೆಳೆಯಿತು. ಪಟ್ಟಣದ ಕೆಲವೆಡೆ ತೇರಿನ ಸ್ವಾಗತ ಕ್ಕಾಗಿ ರಂಗೋಲಿ ಬಿಡಿಸ ಲಾಗಿತ್ತು. ಕೆಲವೆಡೆ ವಿದ್ಯಾರ್ಥಿಗಳು ನಿಂತು ಪುಷ್ಪಾರ್ಚನೆ ಮಾಡಿದರು. ಹಬ್ಬದ ವಾತಾವರಣ ನಿರ್ಮಾಣ ಗೊಂಡಿತ್ತು.

ಮಣಗೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ತೇರಿಗೆ ಜಿಪಂ ಸದಸ್ಯ ಶಿವಾನಂದ ಅವಟಿ, ಗ್ರಾಪಂ ಅಧ್ಯಕ್ಷೆ ಶರಣಮ್ಮ ವಾರದ, ತಾಪಂ ಸದಸ್ಯೆ ನೀಲಮ್ಮೋ ದೊಡಮನಿ, ಎಪಿಎಂಸಿ ಸದಸ್ಯ ಎಂ.ಕೆ. ಮಾಮನಿ, ಹನುಮಂತ ಸುನಗದ, ಸಂಗಪ್ಪ ವಂದಾಲ, ಮುದ್ದಪ್ಪ ಯಳ್ಳಿಗುತ್ತಿ ಮೊದಲಾದವರು ಚಾಲನೆ ನೀಡಿದರು.

ಇಲಾಖೆಯ ಅಧಿಕಾರಿಗಳಾದ ಬಿಇಒ ಎನ್.ಎಚ್. ನಾಗೂರ, ಎಸ್. ಎಸ್. ಹೊಸಮನಿ, ಎ.ಎನ್. ಚಿಮ್ಮಲಗಿ, ಉದಯಕುಮಾರ ಬಶೆಟ್ಟಿ, ವಿ.ಬಿ. ಹೆಬ್ಬಾಳ ಶಿಕ್ಷಕ ಸಂಘಟನೆಯ ಪದಾಧಿಕಾರಿ  ಬಿ.ಟಿ. ಗೌಡರ ಹಾಗೂ ನಿಡಗುಂದಿ ಪಟ್ಟಣದ ವಿವಿಧ ಶಾಲೆಗಳ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ಚಿಣ್ಣರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT