ಶ್ರೀರಂಗಪಟ್ಟಣ: ಬಿಸಿಯೂಟ ಯೋಜನೆಯಡಿ ಶಾಲೆಗಳಿಗೆ ಸರಬರಾಜು ಮಾಡುವ ವಸ್ತುಗಳನ್ನು ಮುಖ್ಯ ಶಿಕ್ಷಕರೊಬ್ಬರು ಗೌಪ್ಯವಾಗಿ ತಮ್ಮ ಮನೆಗೆ ಸಾಗಿಸುತ್ತಿದ್ದ ವೇಳೆ ಗ್ರಾಮಸ್ಥರು ಮಾಲು ಸಹಿತ ಹಿಡಿದಿರುವ ಪ್ರಕರಣ ತಾಲ್ಲೂಕಿನ ಅರಕೆರೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್.ಎಂ.ಸಿದ್ದೇಗೌಡ ಬೈಕ್ನಲ್ಲಿ ಬೇಳೆ, ಅಡುಗೆ ಎಣ್ಣೆ, ಟೊಮೆಟೊ, ಈರುಳ್ಳಿ ಇತರ ವಸ್ತುಗಳನ್ನು ಬೈಕ್ನಲ್ಲಿ ಮನೆಗೆ ಸಾಗಿಸುತ್ತಿದ್ದ ವೇಳೆ ಖುದ್ದು ಹಿಡಿದಿದ್ದಾರೆ. ಸಂಜೆ 6.30ರ ವೇಳೆ ಶಾಲೆಯಿಂದ ಅಕ್ಷರ ದಾಸೋಹ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಬರುತ್ತಿದ್ದ ವೇಳೆ ಶಾಲಾ ಆವರಣದಲ್ಲಿ ಆರೋಪಿಯನ್ನು ಹಿಡಿಯಲಾಗಿದೆ. ಗ್ರಾಮದ ಬಾಲಕೃಷ್ಣ, ರಾಜೇಶ್, ಎ.ಜೆ.ಪುಟ್ಟೇಗೌಡ ಇತರರು ಬೆನ್ನಟ್ಟಿ ಹಿಡಿದಿದ್ದು, ಪ್ರಕರಣ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗೋಪಾಲ್ ಅವರಿಗೆ ಬುಧವಾರ ದೂರು ನೀಡಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಮುಖ್ಯ ಶಿಕ್ಷಕ ಆರ್.ಎಂ.ಸಿದ್ದೇಗೌಡ ಅಕ್ಷರ ದಾಸೋಹ ಯೋಜನೆಯ ವಸ್ತುಗಳನ್ನು ಮನೆಗೆ ಸಾಗಿಸುತ್ತಿದ್ದರು. ಬಡ ಮಕ್ಕಳ ಊಟಕ್ಕೆ ಬಳಸುವ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರು. ಈ ಹಿಂದೆ ಅವರ ಮೇಲೆ ಸಾಕಷ್ಟು ದೂರುಗಳು ಬಂದಿದ್ದವು. ಈಗ ಮಾಲು ಸಹಿತ ಸಿಕ್ಕಿ ಬಿದ್ದಿದ್ದಾರೆ. ಆರೋಪಿಯನ್ನು ಕೂಡಲೇ ಅಮಾನತುಪಡಿಸಬೇಕು. ಪ್ರಕರಣ ಕುರಿತು ನಿಷ್ಪಕ್ಷಪಾತ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.