ಶಿವಮೊಗ್ಗ: ‘ರಂಗಭೂಮಿ ಎನ್ನುವುದು ವ್ಯಕ್ತಿತ್ವದ ತರಬೇತಿ; ನಮಗೆ ಅನಿಸಿದ ಭಾವನೆ ಹಂಚಿಕೊಳ್ಳುವುದನ್ನು ಕಲಿಸುವಂತಹದ್ದು’ ಎಂದು ರಂಗಕರ್ಮಿ ಏಣಗಿ ನಟರಾಜ್ ವಿಶ್ಲೇಷಿಸಿದರು.ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಗೊಂಬೆ ಮನೆ’ ಧಾರವಾಡ, ನವಾಜ್ಬಾಯ್ ರತನ್ ಟಾಟಾ ಟ್ರಸ್ಟ್ ಹಾಗೂ ಇಂಡಿಯಾ. ಫೌಂಡೇಷನ್ ಫಾರ್ ಆರ್ಟ್ಸ್ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಅಕ್ಷರ ಸಿರಿ’ ಪರ್ಯಾಯ ಶಿಕ್ಷಣದಲ್ಲಿ ರಂಗಭೂಮಿತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಂಗಭೂಮಿ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಮ್ಮಲ್ಲಿ ಮೂಡಿದ ಭಾವನೆಗಳನ್ನು ಹೇಗೆ ಅಭಿವ್ಯಕ್ತಗೊಳಿಸಬೇಕು ಎನ್ನುವುದನ್ನು ರಂಗಭೂಮಿ ಕಲಿಸುತ್ತದೆ. ಆದರೆ, ‘ರಂಗಮಂದಿರದಲ್ಲಿ ನಾನು, ನಾನಲ್ಲ ಎಂದು ತಿಳಿದುಕೊಂಡು ನಟನೆಯಲ್ಲಿ ತಲ್ಲೆನರಾಗಬೇಕು. ಆಗ ನಟನೆಗೆ ಮನ್ನಣೆ ಸಿಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಹೇಳಿದರು.
‘ಹೆಗ್ಗೋಡಿನ ‘ನೀನಾಸಂ’ನ ಮೊದಲ ವಿದ್ಯಾರ್ಥಿ ನಾನು. ತಿರುಗಾಟದ ಮೊದಲ ನಾಟಕದಲ್ಲೂ ನಾನು ಅಭಿನಯಿಸಿದ್ದೇನೆ’ ಎಂದು ಸ್ಮರಿಸಿದರು. ರಂಗಕರ್ಮಿ ಎಸ್. ಮಾಲತಿ ಮಾತನಾಡಿ, ಲೆಕ್ಕಾಚಾರದ ಬದುಕು ನಮ್ಮದಾಗಬಾರದು. ಮೌಲ್ಯಗಳು ಬೇಕು. ಮನುಷ್ಯನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.’ಗೊಂಬೆ ಮನೆ’ಯ ಪ್ರಕಾಶ ಗರೂಡ ಮಾತನಾಡಿ, ಆಧುನಿಕತೆಯಲ್ಲಿ ನಾಟಕ, ರಂಗಭೂಮಿ, ಸಾಹಿತ್ಯದ ಕಡೆಗೆ ಗಮನ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ರಂಗಭೂಮಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಉಪ ವಿಭಾಗಾಧಿಕಾರಿ ಎಂ.ಎಲ್. ವೈಶಾಲಿ ಉದ್ಘಾಟಿಸಿದರು.ಎನ್ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಕುಲಸಚಿವ ಎಚ್.ಎಸ್. ಗಣೇಶಮೂರ್ತಿ, ಪ್ರಾಂಶುಪಾಲ ಎಚ್.ಎಲ್. ಜನಾರ್ದನ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪ್ರಮೋದ್ ಸಣ್ಣಕ್ಕಿ ಉಪಸ್ಥಿತರಿದ್ದರು.