ದಾವಣಗೆರೆ: ಬೆಂಗಳೂರಿನ ಹುಡುಗ (ಎಸ್ಎಐ) ಆರ್.ಎನ್. ಸೂರಜ್ ಅವರು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಆರಂಭವಾದ ಅಖಿಲ ಭಾರತ ಹಿರಿಯರ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದರು.
ನಗರದ ಎಸ್.ಎಸ್. ಬಡಾವಣೆಯ ನೇತಾಜಿ ಸುಭಾಷ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೂರಜ್ 21-19, 21-16ರಲ್ಲಿ ಹರಿಯಾಣದ ಸತೀಂದರ್ ಮಲ್ಲಿಕ್ ಅವರನ್ನು ಸೋಲಿಸಿದರು. ಈ ಹೋರಾಟ 12 ನಿಮಿಷಗಳ ಕಾಲ ನಡೆಯಿತು. ಉತ್ತರ ಪ್ರದೇಶದ ಸೌರಬ್ ಅಗರ್ವಾಲ್ ಗೈರು ಹಾಜರಾಗಿದ್ದರಿಂದ ವಾಕ್ಓವರ್ ಪಡೆದು ಸೂರಜ್ ಮುಂದಿನ ಸುತ್ತಿಗೆ ಲಗ್ಗೆ ಇಟ್ಟರು.
ದಿನದ ಇತರ ಪಂದ್ಯಗಳಲ್ಲಿ ಕೇರಳದ ಅರುಣ್ ಜಾರ್ಜ್ 17-21, 20-10, 21-19ರಲ್ಲಿ ಹರಿಯಾಣದ ಕೇತನ್ ಚಹಾಲ್ ವಿರುದ್ಧವೂ, ಮಹಾರಾಷ್ಟ್ರದ ಎಸ್. ಮಿಟ್ಕಾರಿ 21-13, 21-4ರಲ್ಲಿ ಕರ್ನಾಟಕದ ಎಸ್. ಬಾಬು ಮೇಲೂ, ತಮಿಳುನಾಡಿನ ಎಂ. ಜೆರ್ರಿ ಮಾರ್ಟಿನ್ 23-21, 21-10ರಲ್ಲಿ ಉತ್ತರ ಪ್ರದೇಶದ ಅಬ್ದುಲ್ ಬಾರಿ ವಿರುದ್ಧವೂ, ರೇಲ್ವೇಸ್ನ ವೆಂಕಟ್ ಗೌರವ್ 21-12, 21-10ರಲ್ಲಿ ಹರಿಯಾಣದ ಹರೀಂದರ್ ಮಲ್ಲಿಕ್ ಮೇಲೂ, ಛತ್ತೀಸ್ಗಡದ ಡಿ. ಜೈಸ್ವಾಲ್ 21-19, 23-21ರಲ್ಲಿ ಮಹಾರಾಷ್ಟ್ರದ ಎಸ್. ರಾಮಚಂದ್ರನ್ ವಿರುದ್ಧವೂ, ಆಂಧ್ರಪ್ರದೇಶದ ಸಿ.ಎಂ. ಶಶಿಧರ್ 21-15, 21-17ರಿಂದ ರೇಲ್ವೇಸ್ನ ಎಸ್. ಸಂಜೀತ್ ಮೇಲೂ, ಮಹಾರಾಷ್ಟ್ರದ ನಿಗೇಲ್ ಡಿ~ಶಾ 21-13, 21-10ರಲ್ಲಿ ಕೇರಳದ ಕೆ.ಕೆ. ಮಂಜುಶ್ ಮೋಹನ್ ವಿರುದ್ಧವೂ ಜಯ ಪಡೆದು ಮುಂದಿನ ಸುತ್ತು ಪ್ರವೇಶಿಸಿದರು.