ಬೆಂಗಳೂರು: ಸತತ ಗೆಲುವಿನ ಓಟ ಮುಂದುವರಿಸಿರುವ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ 11ನೇ ಬಿಎಸ್ಎನ್ಎಲ್ ವಾಲಿಬಾಲ್ ಟೂರ್ನಿಯಲ್ಲಿ ಸೂಪರ್ ಲೀಗ್ ಹಂತಕ್ಕೆ ಪ್ರವೇಶಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ `ಎ~ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ 25-18, 25-16, 25-21ರಲ್ಲಿ ಬಿಹಾರ ತಂಡವನ್ನು ಮಣಿಸಿತು. ಮೂರು ಸೆಟ್ಗಳಲ್ಲಿ ಆತಿಥೇಯರು ಪ್ರಬಲ ಪ್ರತಿರೋಧ ಎದುರಿಸಿತು.
ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೇರಳ 25-21, 25-19, 25-13ರಲ್ಲಿ ದೆಹಲಿ ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್ (ಎಂಟಿಎನ್ಎನ್) ತಂಡವನ್ನು ಸೋಲಿಸಿತು. ದೆಹಲಿ ತಂಡಕ್ಕೆ ಎದುರಾದ ಸತತ ಮೂರನೇ ನಿರಾಸೆ ಇದು. ಮೊದಲ ಪಂದ್ಯದಲ್ಲಿ ಈ ತಂಡ ಕರ್ನಾಟಕದ ಎದುರು ಸೋಲು ಕಂಡಿತ್ತು.
`ಬಿ~ ಗುಂಪಿನ ಪಂದ್ಯದಲ್ಲಿ ತಮಿಳುನಾಡು 25-7, 25-10, 25-11ರಲ್ಲಿ ರಾಜಸ್ತಾನ ಎದುರು ಗೆಲುವು ಸಾಧಿಸಿತು. ವಿಜಯಿ ತಂಡದ ಸತೀಶ್ ಕುಮಾರ್ ಮತ್ತು ವಿನೋದ್ ಕುಮಾರ್ ಪ್ರಭಾವಿ ಪ್ರದರ್ಶನ ನೀಡಿದರು.
ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಹಿಮಾಚಲ ಪ್ರದೇಶ 25-14, 25-15, 25-16ರಲ್ಲಿ ಎಂಟಿಎನ್ಎಲ್ ಮುಂಬೈ ಮೇಲೂ, ರಾಜಸ್ತಾನ 25-18, 25-21, 15-25, 25-14ರಲ್ಲಿ ಉತ್ತರಖಾಂಡದ ವಿರುದ್ಧವೂ ಜಯ ಸಾಧಿಸಿತು.
ದಿನದ ಕೊನೆಯ ಪಂದ್ಯದಲ್ಲಿ ತಮಿಳುನಾಡು 25-15, 25-21, 25-18ರಲ್ಲಿ ಹಿಮಾಚಲ ಪ್ರದೇಶದ ಮೇಲೂ ಜಯ ಸಾಧಿಸಿತು. ವಿಜಯಿ ತಂಡದ ಸತೀಶ್ ಕುಮಾರ್ ಹಾಗೂ ಜಯಪ್ರಕಾಶ್ ಅತ್ಯುತ್ತಮ ಸ್ಮಾಷ್ ಹಾಗೂ ಬ್ಲ್ಯಾಕ್ಗಳ ಮೂಲಕ ಗಮನ ಸೆಳೆದರು. ಇದರಿಂದ ತಮಿಳುನಾಡಿಗೆ ಗೆಲುವು ಕಷ್ಟವಾಗಲಿಲ್ಲ.
ಕರ್ನಾಟಕ ಆಡಿರುವ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರಿಂದ ಸೂಪರ್ ಲೀಗ್ಗೆ ಪ್ರವೇಶ ಕಷ್ಟವಾಗಲಿಲ್ಲ. ರಾಜಸ್ತಾನ, ತಮಿಳುನಾಡು ಹಾಗೂ ಬಿಹಾರ ತಂಡಗಳು ಸಹ ಈ ಹಂತ ಪ್ರವೇಶಿಸಿವೆ.
ಎಲ್ಲಾ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿವೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ರಾಜಸ್ತಾನದ ಸವಾಲನ್ನು ಎದುರಿಸಲಿದೆ.