ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ಸೇವೆಗಳ ಕಾಯ್ದೆ ವ್ಯಾಪ್ತಿಗೆ ಕೃಷಿ ವಲಯ!

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೃಷಿ `ಅಗತ್ಯ ಸೇವೆ~ ಎನ್ನುವುದಕ್ಕಿಂತ ಅನಿವಾರ್ಯ ಸೇವೆಯಾಗಿದೆ. ಮನುಷ್ಯನ ಮೂಲಭೂತ ಅಗತ್ಯವಾದ ಆಹಾರಕ್ಕೆ ಕೃಷಿಯನ್ನಲ್ಲದೆ ಬೇರೆ ಯಾವ ವೃತ್ತಿಯನ್ನೂ ಅವಲಂಬಿಸಲು ಸಾಧ್ಯವಿಲ್ಲ. ಬೇರೆ ಯಾವುದೇ ವೃತ್ತಿ ಆದಾಯ ತಂದುಕೊಡಬಲ್ಲದೇ ಹೊರತು ಅನ್ನವನ್ನು ತಂದು ಕೊಡಲಾರದು.

ಅಂತಹ ಕೃಷಿ ವಲಯವನ್ನು ಇಂದು  ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ 1981 ರ ವ್ಯಾಪ್ತಿಗೆ ತರಲು ಕೇಂದ್ರ ರ್ಕಾರ ಚಿಂತನೆ ನಡೆಸಿದೆ.  ಮಾನ್ಸೂನ್ ವೈಫಲ್ಯ, ಬರಗಾಲ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳಿಂದ ಕೃಷಿ ವಲಯ ಅನುಭವಿಸುತ್ತಿರುವ ಹಾನಿಯನ್ನು ತಡೆಗಟ್ಟಿ ಅದನ್ನು ಪುನಶ್ಚೇತನಗೊಳಿಸಲು ಇದರಿಂದ ಅನುಕೂಲವಾಗುತ್ತದೆ. ಅಲ್ಲದೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ಅನ್ನು ನೀಡುವುದು ಈ ಕಾಯ್ದೆಯಿಂದ ಅನಿವಾರ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಅದು ಹೇಗೆ? ಎಂಬುದನ್ನು ಮಾತ್ರ ಹೇಳುತ್ತಿಲ್ಲ! ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಮಾಡುವಲ್ಲಿ  ಮತ್ತು ಅದನ್ನು ಅವಲಂಬಿಸಿದ ಜನರಿಗೆ ಉದ್ಯೋಗ ಮತ್ತು ಆದಾಯದ ಭದ್ರತೆಯನ್ನು ತಂದುಕೊಡಲು ಈ ಕಾಯ್ದೆಯಿಂದ ಸಾಧ್ಯವಾದರೆ ಅದನ್ನು ಕೃಷಿವಲಯದ ಕ್ರಾಂತಿಯೆಂದು ಸ್ವಾಗತಿಸೋಣ.

ನಮ್ಮ ದೇಶದ ಕೃಷಿ ವರ್ಷದಲ್ಲಿ ಕೇವಲ 200-240 ದಿನಗಳ ದುಡಿಮೆಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇಂತಹ ವ್ಯವಸಾಯವನ್ನು ಅವಲಂಬಿಸಿ ಶೇ 40ರಷ್ಟು ಕೂಲಿಕಾರರು, ಶೇ 45 ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರು ಹಾಗೂ ಶೇ 7.5ರಷ್ಟು ಕೃಷಿ ಅವಲಂಬಿತ ಕಸುಬುಗಳಲ್ಲಿ  ತೊಡಗಿಕೊಂಡವರು ಬದುಕುತ್ತಿದ್ದಾರೆ. ಇಂತಹವರಿಗೆ ಈ ಕಾಯ್ದೆಯಿಂದ ವರ್ಷದ 365 ದಿನವೂ ಕೆಲಸ ಲಭಿಸುತ್ತದೆಯೇ? ಎಂಬುದು ಬಹು ಮುಖ್ಯ ಪ್ರಶ್ನೆಯಾಗಿದೆ.

ಆದರೆ ಈ  ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ESMA - Essential Services Mainten-ance Act)) ಯನ್ನು ಒಮ್ಮೆ ಅವಲೋಕಿಸಿದರೆ ಅದು ಮಾಡುವ ಅನುಕೂಲಗಳಿಗಿಂತ ಅನಾಹುತಗಳೇ ಹೆಚ್ಚಾಗುವ ಸಾಧ್ಯತೆ ಇದೆ.  ಏಕೆಂದರೆ ಈ ಕಾಯ್ದೆಯ ವ್ಯಾಪ್ತಿಗೆ ಬರುವ ಸೇವೆಗಳಲ್ಲಿ ನಿರತರಾಗಿರುವ ಜನರಿಗೆ ಯಾವ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇರುವುದಿಲ್ಲ.  ಸಮುದಾಯದ ಬೇಡಿಕೆಯನ್ನು ಪೂರೈಸುವ ಸೇವೆಗಳಾದ ಸಾರಿಗೆ, ಸಂಚಾರ, ಅಂಚೆ-ತಂತಿ, ನೀರು, ವಿದ್ಯುತ್ತು, ಭದ್ರತೆ, ಪೊಲೀಸ್, ರಕ್ಷಣಾ ವಲಯ ಹೀಗೆ ಮಹತ್ವದ ಸೇವಾ ವಲಯಗಳಲ್ಲಿ ಕೆಲಸ ಮಾಡುವವರು ತಮ್ಮ ಕುಂದುಕೊರತೆಗಳಿಗಾಗಿ ಹರತಾಳ -ಬಂದ್‌ಗಳನ್ನು ಮಾಡುವ ಯಾವ ಸ್ವಾತಂತ್ರ್ಯವನ್ನೂ  ಹೊಂದಿಲ್ಲ. ಅಂತಹದೇ ಪರಿಸ್ಥಿತಿ ರೈತರಿಗೂ ಬರಬಹುದು.

ಬೀಜ, ಗೊಬ್ಬರಕ್ಕಾಗಿ ಹರತಾಳ ಮಾಡುವುದು, ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರಕುತ್ತಿಲ್ಲ ಎಂದು ರಸ್ತೆ ತಡೆ ಮಾಡುವುದು ಈ ಕಾಯ್ದೆಯಿಂದ ಮೊಟಕುಗೊಳ್ಳಲಿದೆ.  ಈ ಕಾಯ್ದೆಯನ್ನು ಉಲ್ಲಂಘಿಸುವವರನ್ನು ಪ್ರತಿಬಂಧಕ ಆಜ್ಞೆ ಇಲ್ಲದೆ ಹಾಗೂ ಯಾವುದೇ ಕಾರಣವನ್ನು ನೀಡದೆ ಜೈಲಿಗೆ ಹಾಕಬಹುದು.  ಆರು ತಿಂಗಳಿನಿಂದ ಒಂದು ವರ್ಷದವರೆಗೆ ಕಾರಾಗೃಹ ಮತ್ತು  ರೂ200ರಿಂದ 2000ದವರೆಗೆ ದಂಡವನ್ನು ವಿಧಿಸಬಹುದು.

ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಯಾವುದೇ ವಿಚಾರಣೆ ಇಲ್ಲದೆ ಒಂದು ವರ್ಷಗಳ ಕಾಲ ಜೈಲಿನಲ್ಲಿ ಇಡಬಹುದು. ಇಂತಹ ಕ್ರೂರ ಕಾಯ್ದೆಯನ್ನು ಭಯೋತ್ಪಾದನೆ ಮತ್ತು ದೇಶದ್ರೋಹ ಎಸಗುವವರಿಗೆ ಬಳಸಲಾಗುತ್ತದೆ. ಅನ್ನ ಹಾಕುವ ರೈತನಿಗೆ ಇಂತಹ ಕಾಯ್ದೆಗಳನ್ನು ಅನ್ವಯಿಸಿದರೆ ಏನು ಗತಿ? ರೈತರನ್ನು ಗುಲಾಮರಂತೆ ದುಡಿಸಿಕೊಳ್ಳುವುದು, ಅವರ ಬೇಡಿಕೆಗಳನ್ನು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗುತ್ತದೆ.

ಸರ್ಕಾರಗಳು ರೈತರು ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆಗಳನ್ನು ನಿಗದಿ ಮಾಡಬೇಕು ಮತ್ತು ಅವುಗಳನ್ನು ಸರ್ಕಾರವೇ ರೈತರಿಂದ ನೇರವಾಗಿ ಖರೀದಿಸಬೇಕು ಎಂಬ ಬೇಡಿಕೆಯನ್ನು ದಶಕಗಳಿಂದ ಮಾಡುತ್ತಲೇ ಬರಲಾಗಿದೆ. ಆದರೆ ಸರ್ಕಾರ ಅತ್ಯಂತ ಕಡಿಮೆ ಬೆಂಬಲ ಬೆಲೆಯನ್ನು ನೀಡಿ ಆಹಾರಧಾನ್ಯಗಳನ್ನು ಖರೀದಿಸಿ  ಭಾರತ ಆಹಾರ ನಿಗಮದ ಗೋಡೌನುಗಳಿಗೆ ತುಂಬಿಸುತ್ತಿದೆ.
 
ದೇಶದ ಶೇ 27ರಷ್ಟು ಜನ ಹಸಿವೆಯಿಂದ ನರಳುತ್ತಿದ್ದಾರೆ. ಅಂತಹವರಿಗೆ ಪಡಿತರ ವ್ಯವಸ್ಥೆಯ ಮೂಲಕ ಈ ಆಹಾರ ಧಾನ್ಯವನ್ನು ಸಾಕಷ್ಟು ಪ್ರಮಾಣದಲ್ಲಿ ವಿತರಣೆ ಮಾಡಬೇಕು. ಹಾಗಂತ ಸುಪ್ರೀಮ್ ಕೋರ್ಟ್ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೂ ಸಹ ಸಂಗ್ರಹಿಸಲು ಸೂಕ್ತ ಸ್ಥಳವಿಲ್ಲದೆ ಹಾಗೂ ಇಲಿ, ಹೆಗ್ಗಣ, ಕ್ರಿಮಿ ಕೀಟಗಳ ಬಾಧೆಯಿಂದ ಶೇ 20 ರಿಂದ 30ರಷ್ಟು  ಆಹಾರ ಧಾನ್ಯ ಹಾಳಾಗಿ ಹೋಗುತ್ತಿದೆ. ಇಂತಹ ಹೆಚ್ಚುವರಿ ಆಹಾರ ಧಾನ್ಯವನ್ನು ರಫ್ತು ಮಾಡಲು ಅವಕಾಶ ನೀಡಿದರೆ ರೈತರಿಗೆ ಉತ್ತಮ ಬೆಲೆಯಾದರೂ ಸಿಗಬಹುದು.  ಆದರೆ ಕೃಷಿ ಉತ್ಪನ್ನಗಳ ಆಮದು ಮತ್ತು ರಫ್ತು ನೀತಿ ರೈತರ ಹಿತಕ್ಕಿಂತ ಸರ್ಕಾರದ ಹಿತಕ್ಕೆ ಅನುಗುಣವಾಗಿ ನಡೆಯುತ್ತಿರುವುದು ವಿಪರ್ಯಾಸ.

ಅಭಿವೃದ್ಧಿ ಕಾರ್ಯಗಳಿಗಾಗಿ ಮತ್ತು ಕೈಗಾರಿಕೆಗಳ ಸ್ಥಾಪನೆಗಾಗಿ ರೈತರ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಸುಪ್ರೀಮ್ ಕೋರ್ಟ್ ಪರ್ಯಾಯ ಜಮೀನಿನ ವ್ಯವಸ್ಥೆ ಮಾಡದೆ  ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ತೀರ್ಪು ನೀಡಿದೆ.  ಆದರೂ ಸ್ವಾಧೀನ ಪ್ರಕ್ರಿಯೆ ಅವ್ಯಾಹತವಾಗಿ ನಡೆದೇ ಇದೆ. ಸರ್ಕಾರದ ಇಂತಹ ಕ್ರಮಗಳನ್ನು ವಿರೋಧಿಸಿ ಜಲ ಸತ್ಯಾಗ್ರಹ, ಮರಳು ಸತ್ಯಾಗ್ರಹದಂತಹ ವಿಭಿನ್ನ ಪ್ರತಿಭಟನೆಗಳನ್ನು ರೈತರು ಮಾಡುತ್ತಿದ್ದಾರೆ. ಆದರೆ  ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ ಜಾರಿಗೆ ಬಂದರೆ ರೈತರು ಇಂತಹ ಪ್ರತಿಭಟನೆಯ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ.

ಸರ್ಕಾರ ರೈತರಿಗೆ ನೀಡುವ ಬೆಂಬಲ ಬೆಲೆ ಹಲವಾರು ಬಾರಿ ತೆರೆದ ಮಾರುಕಟ್ಟೆಯ ಧಾರಣೆಗಿಂತ ಕಡಿಮೆ ಇರುತ್ತದೆ. ರೈತರು  ಕೃಷಿಗೆ ಹೂಡಿದ ಬಂಡವಾಳಕ್ಕಿಂತ ಕಡಿಮೆ ಆದಾಯ ಅವರ ಉತ್ಪನ್ನಗಳಿಗೆ ಲಭಿಸುತ್ತಿದೆ. ಇದರಿಂದಾಗಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಯ ದಾರಿಯನ್ನು ಆತ ತುಳಿಯುತ್ತಿದ್ದಾನೆ. ರೈತರೆಂದರೆ ಸಾಲ ಮನ್ನಾಕ್ಕಾಗಿ ಮತ್ತು ಸಬ್ಸಿಡಿಗಾಗಿ ಸರ್ಕಾರದ ಮುಂದೆ ಕೈಚಾಚುವವರು ಎಂಬ ಕೆಟ್ಟ ಹಣೆಪಟ್ಟಿಯನ್ನು ಈ ವ್ಯವಸ್ಥೆ ಅವರ ಹಣೆಗೆ ಕಟ್ಟುತ್ತಿದೆ.

ಆದರೆ ಕೈಗಾರಿಕಾ ಉತ್ಪನ್ನಗಳಿಗೆ ನಿಗದಿಯಾಗುವ ರೀತಿ ಕೃಷಿ ಉತ್ಪನ್ನಗಳಿಗೂ ಬೆಲೆ ನಿಗದಿ ಮಾಡಬೇಕು.  ಕೈಗಾರಿಕೆಗಳಿಗೆ ನೀಡುತ್ತಿರುವ ರಿಯಾಯಿತಿ ಮತ್ತು ಸವಲತ್ತುಗಳನ್ನು ಒಕ್ಕಲುತನಕ್ಕೆ ನೀಡಿದರೆ  ಕೃಷಿಯು ಕೂಡಾ ಅಗತ್ಯ ಸೇವೆ ಏಕೆ, ಅಪೇಕ್ಷಣಿಯ ಸೇವಾ ವಲಯವಾಗಬಲ್ಲದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT