ದಾವಣಗೆರೆ: ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ಭೂ ಹಗರಣಗಳನ್ನು ಖಂಡಿಸಿ ನಗರದ ‘ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ’ದ ಕಾರ್ಯಕರ್ತರು ಶುಕ್ರವಾರ ಚಾಮರಾಜಪೇಟೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಸ್ಯುಸಿಐ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಶ್ರೀರಾಮ್ ಮಾತನಾಡಿ, ಕೇಂದ್ರ ಸರ್ಕಾರ ಒಂದು ವರ್ಷದಲ್ಲಿ ಆರು ಬಾರಿ ತೈಲ ಬೆಲೆ ಏರಿಕೆ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದು ಶ್ರೀಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಅಲ್ಲದೇ, ಭ್ರಷ್ಟಾಚಾರ ಕೂಡ ಎಗ್ಗಿಲ್ಲದೆ ಸಾಗಿದೆ ಎಂದು ಆರೋಪಿಸಿದರು.
ಸರ್ಕಾರವೇ ನೇರವಾಗಿ ಯೋಗ್ಯ ಬೆಲೆಯಲ್ಲಿ ದವಸ ಧಾನ್ಯಗಳನ್ನು ಖರೀದಿಸಿ ಗ್ರಾಹಕರಿಗೆ ನೀಡಬೇಕು. ಕೃತಕ ಅಭಾವವನ್ನು ಸೃಷ್ಟಿಸಿ ಬೆಲೆ ಏರಿಕೆಗೆ ಕಾರಣರಾದ ಅಕ್ರಮ ದಾಸ್ತಾನುಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ರಾಜ್ಯ ಹಾಗೂ ದೇಶದ ವಿವಿಧೆಡೆ ಶೇಖರಣಾ ಕೇಂದ್ರಗಳನ್ನು ತೆರೆಯಬೇಕು. ಭೂ ಕಬಳಿಕೆ ನಿಲ್ಲಬೇಕು. ಅಕ್ರಮವಾಗಿ ಕಬಳಿಕೆ ಮಾಡಿರುವ ಎಲ್ಲ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕು. ಭ್ರಷ್ಟಾಚಾರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಎಲ್ಲ ತಪ್ಪಿತಸ್ಥರಿಗೂ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ರೈತ ವಿರೋಧಿ ಹಾಗೂ ಜನ ವಿರೋಧಿ ಸಂಸ್ಥೆಯನ್ನು ಈ ಕೂಡಲೇ ವಿಸರ್ಜಿಸಬೇಕು. ಕೆಎಂಎಫ್ ಹಾಲಿನ ದರ ಹೆಚ್ಚಿಸುವ ಪ್ರಸ್ತಾವ ಹಾಗೂ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಪ್ರಸ್ತಾವವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಮುಖಂಡರಾದ ಟಿ.ವಿ.ಎಸ್. ರಾಜು, ವಿ. ಮಂಜುನಾಥ್, ವಿ. ದೀಪಾ, ಶಿವಾಜಿರಾವ್, ಸಂತೋಷ್ ಕುಮಾರ್, ಮಂಜುನಾಥ್ ರೆಡ್ಡಿ ಇತರರು ಹಾಜರಿದ್ದರು.