ಭರಮಸಾಗರ (ಚಿತ್ರದುರ್ಗ ಜಿಲ್ಲೆ): ಅಗ್ನಿ ಆಕಸ್ಮಿಕದಲ್ಲಿ ಎರಡು ಎಕರೆ ಮೆಕ್ಕೆಜೋಳ ಫಸಲು ಪೂರ್ತಿ ನಾಶವಾದ ಘಟನೆ ಸಮೀಪದ ಕೊಳಹಾಳ್ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಇಲ್ಲಿನ ಎಕೆ ಕಾಲೊನಿಯ ರಂಗಪ್ಪ ಎಂಬುವವರ ಹೊಲದಲ್ಲಿ ಈ ಘಟನೆ ನಡೆದಿದೆ. ಎಲ್ಲೆಡೆ ಬೆಳೆ ವಿಫಲವಾದರೂ ಮುಂಚಿತವಾಗಿ ಬಿತ್ತನೆ ಮಾಡಿದ್ದರಿಂದ ಈ ಬಾರಿ ಉತ್ತಮ ಫಸಲು ಬಂದಿತ್ತು. ಸುಮಾರು 40 ಕ್ವಿಂಟಲ್ಗೂ ಅಧಿಕ ಇಳುವರಿ ಬರುವ ನಿರೀಕ್ಷೆ ಇತ್ತು ಎಂದು ರಂಗಪ್ಪ ತಿಳಿಸಿದರು.
ಮೆಕ್ಕೆಜೋಳದ ತೆನೆಗಳ ಜತೆಗೆ ಸಪ್ಪೆಯೂ ಸುಟ್ಟಿರುವುದರಿಂದ ಮೇವು ಕೂಡಾ ಇಲ್ಲದಂತಾಗಿದೆ. ಈಗ ಬೆಳೆ ಹಾನಿಯಿಂದ ಬೀಜ, ಗೊಬ್ಬರ, ಬಿತ್ತನೆಗೆ ಮಾಡಿದ ಸಾಲ ತೀರಿಸುವ ದಾರಿ ಕಾಣದಂತಾಗಿದೆ. ತಮಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.