`ಕನ್ನಡ ಸಿನಿಮಾ ನಿರ್ಮಾಪಕ~ ಎಂಬ ಪದಕ್ಕೆ `ಸತ್ತ ನನ್ಮಗ~ ಎಂಬ ಅರ್ಥವಿದೆ~ ಎಂದವರು `ಅಚ್ಚುಮೆಚ್ಚು~ ಚಿತ್ರದ ನಿರ್ಮಾಪಕ ಲೋಕೇಶ್.
ಹೀಗೆ, ನಕಾರಾತ್ಮಕ ಅರ್ಥದ ಅರಿವಿದ್ದೂ, ಸುಮಾರು ಒಂದೂವರೆ ಕೋಟಿ ರೂಪಾಯಿ ಸುರಿದು `ಅಚ್ಚುಮೆಚ್ಚು~ ಚಿತ್ರವನ್ನು ಅವರು ನಿರ್ಮಿಸಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡಿರುವುದಷ್ಟೇ ಅಲ್ಲ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ.
`ಅಚ್ಚುಮೆಚ್ಚು~ ಗೆಲ್ಲುವ ಬಗ್ಗೆ ವಿಶ್ವಾಸ ಹೊಂದಿರುವ ಲೋಕೇಶ್ ಅವರಿಗೆ- ನಿರ್ಮಾಪಕ ಪದದ ಹೊಸ ಅರ್ಥವನ್ನು ಬದಲಾಯಿಸುವ ಆಸೆ. ಅವರು ಈ ಆಸೆ ವ್ಯಕ್ತಪಡಿಸಿದ್ದು
`ಅಚ್ಚುಮೆಚ್ಚು~ ಚಿತ್ರದ ಹಾಡುಗಳ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ.
ಈ ಚಿತ್ರದ ನಿರ್ದೇಶಕ ಹಿಮಾಯತ್ ಖಾನ್ ಈ ಮೊದಲು ಕ್ಯಾನ್ಸರ್ ಕುರಿತು ಸಾಕ್ಷ್ಯಚಿತ್ರ ತಯಾರಿಸಿದ ಅನುಭವ ಹೊಂದಿದವರು.
ಇದು ಅವರ ಮೊದಲ ಕನ್ನಡ ಸಿನಿಮಾ. ಅವರು ತಮ್ಮ ಚಿತ್ರದ ಹಾಡುಗಳು ಸೂಫಿ ಮತ್ತು ರಾಕ್ ರಾಗಗಳನ್ನು ಹೊಂದಿದ್ದು ಜನರಿಗೆ ಹತ್ತಿರವಾಗಲಿವೆ ಎಂದು ಹೇಳಿ ಮಾತು ಮುಗಿಸಿದರು.
ಸಂಗೀತ ನಿರ್ದೇಶಕ ಎ.ಎಮ್.ನೀಲ್ ಇದೇ ಮೊದಲ ಬಾರಿಗೆ ರೋಮ್ ಶೈಲಿಯ ರಾಗಗಳನ್ನು ನೀಡುವ ಪ್ರಯತ್ನ ಮಾಡಿರುವುದಾಗಿ ಹೇಳಿದರು.
`ಸಕಾರಾತ್ಮಕ ನಿಲುವುಗಳಿಗೆ ಉತ್ತೇಜನ ನೀಡುವ ಕಥೆ ನಮ್ಮ ಚಿತ್ರದ್ದು. ಇಂಥ ಕಥೆ ಇದುವರೆಗೆ ಕನ್ನಡ ಸಿನಿಮಾಗಳಲ್ಲಿ ಬಂದಿಲ್ಲ~ ಎಂದು ತರುಣ್ ಅನಿಸಿಕೆ ವ್ಯಕ್ತಪಡಿಸಿದರು.
ಹಿರಿಯ ನಟ ಉಮೇಶ್ ಈ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರಂತೆ. `ಪುಟ್ಟ ಪಾತ್ರವಾದರೂ ತಮ್ಮ ಶ್ರಮ ಎಂದಿನಂತೆ ಇದ್ದೇ ಇದೆ~ ಎಂದರು. ಹಿರಿಯ ಸಂಗೀತ ನಿರ್ದೇಶಕ ರಾಜನ್ ಗೀತೆಗಳ ಸೀಡಿಗಳನ್ನು ಬಿಡುಗಡೆ ಮಾಡಿ ಶುಭ ಆಶಿಸಿದರು.