ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಂಗಡದಲ್ಲಿ ಗುರು– ಶಿಷ್ಯನ ಕಾದಾಟ

Last Updated 3 ಮೇ 2014, 19:30 IST
ಅಕ್ಷರ ಗಾತ್ರ

ಅಜಂಗಡ: ಉತ್ತರ ಪ್ರದೇಶದ ಪೂರ್ವ ಭಾಗದ ಪ್ರಮುಖ ಜಿಲ್ಲೆ ಅಜಂಗಡ. ದೆಹಲಿ ‘ಬಟ್ಲಾ ಹೌಸ್‌ ಎನ್‌ಕೌಂಟರ್’ ಬಳಿಕ ಅಜಂಗಡದ ಹೆಸರು ಹೆಚ್ಚು ಚಲಾವಣೆಯಲ್ಲಿದೆ.

ಆರು ವರ್ಷದ ಹಿಂದಿನ ಈ ಎನ್‌ಕೌಂಟರ್‌ ಕುರಿತು ಅನೇಕ ಅನುಮಾನಗಳು ವ್ಯಕ್ತವಾಗಿವೆ. ದೆಹಲಿ ಹೈಕೋರ್ಟ್‌ ಆದೇಶದನ್ವಯ ನಡೆದ ‘ಮಾನವ ಹಕ್ಕು­ಗಳ ಆಯೋಗದ ವಿಚಾರಣೆ’ ಎಲ್ಲ ಆಕ್ಷೇಪಗಳನ್ನು ತಳ್ಳಿ­ಹಾಕಿದೆ. ಈ ಬಗ್ಗೆ ನ್ಯಾಯಾಂಗ ವಿಚಾರಣೆ ಅಥವಾ ಸಿಬಿಐ ತನಿಖೆ ನಡೆಸಬೇಕೆಂಬ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ.

ಬಟ್ಲಾ ಹೌಸ್‌ ಎನ್‌ಕೌಂಟರ್‌ಗೂ ಅಜಂಗಡಕ್ಕೂ ಸಂಬಂಧವಿದೆ. ಪೊಲೀಸ್‌ ಎನ್‌ಕೌಂಟರ್‌ಗೆ ಬಲಿ­ಯಾದ ಆತೀಫ್‌ ಅಮೀನ್‌, ಮೊಹಮದ್‌ ಸಾಜಿದ್‌ ಇಬ್ಬರೂ ಈ ಅಜಂಗಡದವರು. ಘಟನೆ ಬಳಿಕ ಪಟ್ಟ­ಣದ ಇಬ್ಬರನ್ನು ಬಂಧಿಸಲಾಗಿದೆ. ಅನೇಕರು ಕಣ್ಮರೆ ಆಗಿ­ದ್ದಾರೆ. ‘ಕಣ್ಮರೆ ಆದವರಲ್ಲಿ ಹಲವರು ಅಮಾಯಕರು’ ಎನ್ನುವುದು ಅಜಂಗಡದ ಅನೇಕರ ಅಭಿಪ್ರಾಯ.

ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಸರ್ಕಾರ ಅಜಂಗಡದ ಅಮಾಯಕರನ್ನು ಬಿಡುಗಡೆ ಮಾಡಿಸು­ವು­ದಾಗಿ ಭರವಸೆ ನೀಡಿದೆ. ಇದುವರೆಗೆ ಆಶ್ವಾಸನೆ ಈಡೇ­ರಿಲ್ಲ. ಈ ಘಟನೆ ಕುರಿತು ನ್ಯಾಯಾಂಗ ವಿಚಾರಣೆ ಅಥವಾ ಸಿಬಿಐ ತನಿಖೆ ನಡೆಸುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಿಲ್ಲ. ಅಖಿಲೇಶ್‌ ಸರ್ಕಾರ ಪಟ್ಟು ಹಿಡಿದಿದ್ದರೆ ಅಜಂಗಡದ ಯುವಕರಿಗೆ ನ್ಯಾಯ ಸಿಗುತ್ತಿತ್ತು ಎಂದು ಅವರು ಹೇಳುತ್ತಿದ್ದಾರೆ.

ಉಗ್ರರತ್ತ ಒಲವು: ದೆಹಲಿ ಎನ್‌ಕೌಂಟರ್ ಬಳಿಕ ಅಜಂ­ಗಡವನ್ನು ‘ಆತಂಕಗಡ’ವೆಂದು ಕರೆಯಲಾಗು­ತ್ತಿದೆ. ಇಲ್ಲಿನ ಅನೇಕ ಯುವಕರು ‘ಇಂಡಿಯನ್‌ ಮುಜಾ­ಹಿ­ದ್ದೀನ್‌’ ಸೇರುತ್ತಿದ್ದಾರೆಂಬ ಅಂಶ ಕಳವಳಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ‘ಭಯೋತ್ಪಾದನೆ ಕುದಿ ಬಿಂದು’ ಎಂದು ಭಾವಿಸಲಾಗಿರುವ ಅಜಂಗಡದಿಂದಲೇ ಸಮಾ­ಜ­ವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್‌ ಯಾದವ್‌ ಸ್ಪರ್ಧಿಸಿದ್ದಾರೆ. ಇದು ಅವರ ಎರಡನೇ ಕ್ಷೇತ್ರ. ‘ಮೈನ್‌ಪುರಿ’ ಅವರ ಸ್ವಂತ ಕ್ಷೇತ್ರ.

ಸೋಲಿನ ಭಯದಿಂದ ಅವರು ಅಜಂಗಡಕ್ಕೆ ಬಂದಿಲ್ಲ. ಪೂರ್ವ ಭಾಗದಲ್ಲಿ ಪಕ್ಷದ ನೆಲೆ ಭದ್ರಪಡಿಸಿಕೊಳ್ಳುವ ಉದ್ದೇಶ­ದಿಂದ ಅಖಾಡಕ್ಕಿಳಿದಿದ್ದಾರೆ. ನರೇಂದ್ರ ಮೋದಿ ಅವರಿಗೆ ಕಡಿವಾಣ ಹಾಕಲು ಇಲ್ಲಿಗೆ ಬಂದಿರುವುದಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಒಟ್ಟು 32 ಲೋಕಸಭಾ ಕ್ಷೇತ್ರಗಳಿವೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಾರಾಣಸಿಗೆ ಬರುತ್ತಿದ್ದಂತೆ, ಮುಲಾಯಂ ಅಜಂಗಡಕ್ಕೆ ಓಡಿ ಬಂದಿದ್ದಾರೆ. ಅಜಂಗಡ ರಾಮ ಮನೋಹರ ಲೋಹಿಯಾ ಅವರ ಕಾಲದಿಂದ ಸಮಾಜವಾದಿಗಳ ಭದ್ರ ನೆಲೆ. ಎಸ್‌ಪಿ, ಯಾದವರು ಹಾಗೂ ಮುಸ್ಲಿಮರ ಸಮೀಕರಣದೊಂದಿಗೆ ರಾಜಕಾರಣ ಮಾಡುತ್ತಿದೆ. ಅಜಂಗಡದಲ್ಲೂ ಅದೇ ಪ್ರಯೋಗ ನಡೆಯುತ್ತಿದೆ. ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅಪ್ಪನ ಪ್ರಚಾರದ ನೇತೃತ್ವ ವಹಿಸಿದ್ದಾರೆ.

ವಿಚಿತ್ರವೆಂದರೆ ಮುಲಾಯಂಸಿಂಗ್ ಅವರಿಗೆ ಅಜಂಗಡದಲ್ಲಿ ಸವಾಲೆಸೆದಿರುವ ಬಿಜೆಪಿ ಅಭ್ಯರ್ಥಿ ಅವರ ಒಂದು ಕಾಲದ ಶಿಷ್ಯ ರಮಾಕಾಂತ ಯಾದವ್‌. ರಮಾಕಾಂತ ಲೋಕಸಭೆ ಹಾಲಿ ಸದಸ್ಯ. 1996, 99­ರಲ್ಲಿ ಎಸ್‌ಪಿಯಿಂದ ಆಯ್ಕೆಯಾಗಿದ್ದರು. 2004­ರಲ್ಲಿ ಬಹುಜನ ಸಮಾಜ ಪಕ್ಷ ಪ್ರತಿನಿಧಿಸಿದ್ದರು. 2009ರಲ್ಲಿ ಬಿಜೆಪಿಯಿಂದ ಚುನಾಯಿತರಾಗಿದ್ದಾರೆ.

ಅಜಂಗಡದಲ್ಲಿ ಸುಮಾರು 2.5ಲಕ್ಷ ಮುಸ್ಲಿಮರು, ಎರಡು ಲಕ್ಷ ಯಾದವ ಮತದಾರರಿದ್ದಾರೆ. ಇವೆರಡೂ ಸಮುದಾಯಗಳಲ್ಲದೆ ಇತರ ಕೆಲವು ಹಿಂದುಳಿದ ಜಾತಿ­ಗಳ ಬೆಂಬಲವೂ ಮುಲಾಯಂಗೆ ಸಿಗಲಿದೆ ಎಂದು ಎಸ್‌ಪಿ­ ಸ್ಥಳೀಯ ನಾಯಕರು ನಿರೀಕ್ಷಿಸಿದ್ದಾರೆ. ಆದರೆ, ಮುಜಫ್ಫರ್‌ನಗರ ಮತೀಯ ಗಲಭೆ ನಂತರ ಅಲ್ಪ­ಸಂಖ್ಯಾತ ಸಮುದಾಯ ಸಂಪೂರ್ಣವಾಗಿ ಮುಲಾಯಂ ಅವರ ಜತೆಗಿಲ್ಲ ಎನ್ನುವ ಮಾತು ಕೇಳಿಬರು­ತ್ತಿದೆ. ಮತೀಯ ಗಲಭೆ ತಡೆಯಲು ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವನ್ನು ರಾಜ್ಯ ಸರ್ಕಾರ ಎದುರಿಸುತ್ತಿದೆ. ಅಲ್ಲದೆ, ಬಟ್ಲಾ ಹೌಸ್‌ ಎನ್‌ಕೌಂಟರ್‌ ಬಳಿಕ ಅಜಂ­ಗ­ಡದ ‘ಅಮಾ­ಯಕ’ ಯುವಕ­ರನ್ನು ಪೊಲೀ­ಸರು ಎಳೆ­ದೊ­ಯ್ದಿ­­ದ್ದಾರೆ. ಅವ­ರನ್ನು ಬಿಡಿಸುವ ಪ್ರಯತ್ನಗಳು ನಡೆದಿಲ್ಲವೆಂಬ ಅಸಮಾ­ಧಾನ­ವಿದೆ.

ಮುಸ್ಲಿಂ ಸಮುದಾಯದ ಕೆಲವರು, ಮುಜಫ್ಫರ್‌ ನಗರ ಗಲಭೆ ಬಳಿಕ ರಾಜ್ಯ ಸರ್ಕಾರ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡಿದೆ; ಸಕಾಲಕ್ಕೆ ಪರಿಹಾರ, ಪುನರ್ವಸತಿ ಒದಗಿಸಿದೆ ಎಂದು ಹೇಳುತ್ತಾರೆ. ಕಳೆದ ವರ್ಷದ ಕೋಮು ಗಲಭೆ ಕುರಿತು ಅಲ್ಪಸಂಖ್ಯಾತ ಸಮುದಾಯದಲ್ಲಿ ತದ್ವಿರುದ್ಧ ಅಭಿಪ್ರಾಯಗಳಿವೆ. ಕೆಲವರು ಮಾಯಾವತಿ ಅವರ ಬಿಎಸ್‌ಪಿ ಸರ್ಕಾರದಲ್ಲಿ ಕಾನೂನು– ಸುವ್ಯವಸ್ಥೆ ಉತ್ತಮವಾಗಿತ್ತು ಎಂದು ಪ್ರತಿಪಾದಿಸುತ್ತಿದ್ದಾರೆ.

‘ದೆಹಲಿ ಬಟ್ಲಾ ಹೌಸ್‌ನಲ್ಲಿ ನಡೆದಿದ್ದು ನಕಲಿ ಎನ್‌ಕೌಂಟರ್‌. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಕೆೇಂದ್ರದ ಮೇಲೆ ರಾಜ್ಯ ಒತ್ತಡ ಹಾಕಬಹುದಿತ್ತು. ಅಗತ್ಯವಾದರೆ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆಯಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ಅಮಾಯಕ ಯುವಕರನ್ನು ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ ನಿಷ್ಕ್ರಿಯರಾದರು’ ಎಂದು ಸಂಜರಾಪುರ ‘ರಿಹಾಯ್‌ ಮಂಚ್‌’ ಮುಖಂಡ ತಾರೀಖ್‌ ಶಫೀಕ್‌ ಆರೋಪಿಸಿದರು.

‘ಎಸ್‌ಪಿ ಮುಖಂಡರು ಹೇಳುವುದೊಂದು, ಮಾಡುವುದೊಂದು. ಇದರಿಂದ ಅಜಂಗಡದ ಅಲ್ಪಸಂಖ್ಯಾತ ಸಮುದಾಯ ಅಸಮಾಧಾನಗೊಂಡಿದೆ. ಈ ಧೋರಣೆಯು ಮುಲಾಯಂ ಅವರಿಗೆ ಅಡ್ಡಿಯಾದರೂ ಆಗಬಹುದು’ ಎನ್ನುವುದು ಶಫೀಕ್‌ ಅವರ ಅನಿಸಿಕೆ. ಆದರೆ, ಕ್ಷೇತ್ರದ ಪಂಕಜ್‌ ಗೌತಮ್‌ ಬೇರೆ ಅಭಿಪ್ರಾಯ ಹೊಂದಿದ್ದಾರೆ. ‘ಅಜಂಗಡದಲ್ಲಿ ಮುಲಾಯಂ ಅವರಿಗೆ ಕಷ್ಟವಿಲ್ಲ. ಸುಲಭವಾಗಿ ದಡ ಮುಟ್ಟಲಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಬಿಜೆಪಿ ಅಭ್ಯರ್ಥಿ ರಮಾಕಾಂತ  ದುರ್ಬಲರಲ್ಲ. ಯಾದವ ಸಮುದಾಯದ ಮೇಲೆ ಅವರಿಗೂ ಹಿಡಿತವಿದೆ. ಸಾಕಷ್ಟು ಮತಗಳನ್ನು ಅವರು ಕೀಳಲಿದ್ದಾರೆ. ದಲಿತರು ಮತ್ತಿತರರು ಅವರಿಗೆ ಬೆಂಬಲವಾಗಿ ನಿಲ್ಲಬಹುದು’ ಎಂದು ಮೇಘರಾಜ್‌ ಹೇಳಿದರು. ಅಧಿಕ ಪ್ರಮಾಣದಲ್ಲಿ ಕಬ್ಬು ಬೆಳೆಯುವ ಅಜಂಗಡ ಅತ್ಯಂತ ಹಿಂದುಳಿದಿದೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಭಾಗದಲ್ಲಿ ಕಾರ್ಖಾನೆಗಳಿಲ್ಲ. ರೈತರಿಗೆ ಆಸರೆಯಾಗಿದ್ದ ಒಂದು ಸಕ್ಕರೆ ಕಾರ್ಖಾನೆಯೂ ಮುಚ್ಚಿದೆ. ಉದ್ಯೋಗಕ್ಕಾಗಿ ಸೌದಿ ಕಡೆಗೆ ಮುಖ ಮಾಡಿರುವ ಅನೇಕ ಯುವಕರಿಗೆ ಪಾಸ್‌ಪೋರ್ಟ್‌ ಸಿಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.

ಮೋದಿ ಉತ್ತರ ಪ್ರದೇಶದ ವಾರಾಣಸಿಗೆ ಬರುವುದರೊಂದಿಗೆ ರಾಜ್ಯ ರಾಜಕೀಯ ಲೆಕ್ಕಾಚಾರಗಳನ್ನು ಬದಲಾಯಿಸಿದ್ದಾರೆ. ಬಿಜೆಪಿಯ ರಾಜಕೀಯ ತಂತ್ರದಿಂದ ಎಸ್‌ಪಿ ಮತ್ತು ಬಿಎಸ್‌ಪಿ ಚಿಂತೆಗೊಳಗಾಗಿವೆ. ಪೂರ್ವ ಭಾಗದಲ್ಲಿ ಮೋದಿ ಯಾತ್ರೆಗೆ ಅಡ್ಡಗಾಲು ಹಾಕುವ ಉದ್ದೇಶದಿಂದಲೇ ಮುಲಾಯಂ ಅಜಂಗಡಕ್ಕೆ ಬಂದಿದ್ದಾರೆ ಎಂದು ಬಿಜೆಪಿ ನಾಯಕರು ವ್ಯಾಖ್ಯಾನಿಸುತ್ತಿದ್ದಾರೆ.

ಅಜಂಗಡದಲ್ಲಿ ಗುರು– ಶಿಷ್ಯನ ನಡುವೆ ಹಣಾಹಣಿ ಏರ್ಪಟ್ಟಿದೆ. ಸಮಾಜವಾದಿ ಪಕ್ಷ ಬಲವಾಗಿ ನಂಬಿಕೊಂಡಿರುವ ಯಾದವರು ಮತ್ತು ಮುಸ್ಲಿಮರು ಬೆಂಬಲಿಸಿದರೆ ಮುಲಾಯಂ ಪ್ರಯಾಸವಿಲ್ಲದೆ ಗೆಲ್ಲುತ್ತಾರೆ. ಅಕಸ್ಮಾತ್‌ ಅಲ್ಪಸಂಖ್ಯಾತ ಸಮುದಾಯದ ಮತಗಳು ಬೇರೆ ಬೇರೆ ಪಕ್ಷಗಳಿಗೆ ಹಂಚಿಕೆಯಾದರೆ ಅವರಿಗೆ ಕಷ್ಟ ಆಗಲಿದೆ. ಸದ್ಯಕ್ಕೆ ಎಸ್‌ಪಿ ಮುಖಂಡ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಬಿಜೆಪಿ ಕೂಡಾ ಕ್ಷೇತ್ರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ಮುಲಾಯಂ ಅಜಂಗಡಕ್ಕೆ ಬರುವ ಮೂಲಕ ಬಿಜೆಪಿ ಪೂರ್ವ ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನ ಪಡೆಯದಂತೆ ತಡೆಯುವರೇ ಎಂಬ ಪ್ರಶ್ನೆಗೆ ಉತ್ತರ ಸಿಗಲು ಮೇ 16ರವರೆಗೆ ಕಾಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT