ಅಜ್ಜಂಪುರ: ಮುಂಗಾರಿನ ಅರೆಬರೆ ಮಳೆಯ ನಡುವೆ ಬಿತ್ತನೆ ಮಾಡಿ ಕೈಸುಟ್ಟುಕೊಂಡ ಹೋಬಳಿ ರೈತರು, ಹಿಂಗಾರಿನಲ್ಲಿ ನಿರೀಕ್ಷಿತ ಮಳೆಯಾಗದಿದ್ದರೂ ಅನ್ಯ ಮಾರ್ಗವಿಲ್ಲದೇ, ಮಳೆ ಬರುವುದೆಂಬ ಆಶಾವಾದದಲ್ಲಿ ಹಿಂಗಾರಿನ ಪ್ರಮುಖ ಬೆಳೆ ಕಡಲೆಕಾಳು, ಜೋಳದ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಈವರೆಗೆ ರೈತರು ರೈತಸಂಪರ್ಕ ಕೇಂದ್ರದಿಂದ 640 ಕ್ವಿಂಟಾಲ್ ಕಡಲೆಕಾಳು, 160 ಕ್ವಿಂಟಾಲ್ ಬಿಜಾಪುರ ಜೋಳದ (ಎಂ35-1) ಬಿತ್ತನೆ ಬೀಜ ಖರೀದಿಸಿದ್ದು, 2050ಕ್ಕೂ ಅಧಿಕ ಹೆಕ್ಟೇರು ಭೂಮಿಯಲ್ಲಿ ಬಿತ್ತನೆ ಆರಂಭಿಸಿದ್ದಾರೆ.
ಕೇಂದ್ರದಲ್ಲಿ ಇನ್ನೂ 400 ಕ್ವಿಂಟಾಲ್ ಕಡಲೆಕಾಳು, 20 ಕ್ವಿಂಟಾಲ್ ಜೋಳದ ಬಿತ್ತನೆ ಬೀಜಗಳು ದಾಸ್ತಾನಿವೆ. ಹಿಂಗಾರು ಬಿತ್ತನೆಗೆ ಇನ್ನೂ ಕಾಲಾವಕಾಶ ಇರುವುದು, ಬಿತ್ತನೆ ಬೇಜದ ದರ ಅಧಿಕವಾಗಿರುವುದು ಹಾಗೂ ಮಳೆಯಾಗದಿರುವುದರಿಂದ ರೈತರು ಬಿತ್ತನೆ ಬೀಜ ಖರೀದಿಗೆ ಉತ್ಸಾಹ ತೋರುತ್ತಿಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿ ಅರುಣ್ಕುಮಾರ್.
ಪ್ರಸಕ್ತ ದಿನಗಳಲ್ಲಿನ ಉಷ್ಣಾಂಶದ ಪ್ರಮಾಣ ಅಧಿಕವಾಗಿದ್ದು, ನಿರೀಕ್ಷಿತ ಮಳೆ ಬಾರದಿದ್ದರೆ, ಬಿತ್ತನೆಗೊಂಡಿರುವ ಬೀಜಗಳು ತೇವಾಂಶದ ಕೊರತೆಯಿಂದ ಮೊಳಕೆಯೊಡೆಯುವುದಿಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
`ಎಕರೆಯೊಂದಕ್ಕೆ ಸುಮಾರು 30 ಕೆಜಿ ಕಡಲೆಕಾಳು, ಒಂದು ಚೀಲ ಗೊಬ್ಬರ ಬಿತ್ತನೆಗೆ ಬಳಸಲಾಗುತ್ತಿದೆ, ಮಳೆಯ ಕಣ್ಣಾಮುಚ್ಚಾಲೆಯಿಂದ ಮಂಗಾರಿನಲ್ಲಿ ಈರುಳ್ಳಿ ಬೆಳೆಬಾರದೇ ರೈತರು ಕಂಗಾಲಾಗಿದ್ದು, ಈ ವರ್ಷ ನಿರೀಕ್ಷಿತ ಮಳೆಯಾದೇ ಬೆಳೆಯಾಗದಿದ್ದರೆ ನಮ್ಮ ಗತಿಯೇನು~ ಎಂದು ರೈತ ಮಲ್ಲಪ್ಪ ಅವರು ಆತಂಕದ ನಡುವೆಯೇ ಕಡಲೆಕಾಳು ಬಿತ್ತನೆ ಮಾಡಿದರು.