ಬೀರೂರು: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ಪರವಾಗಿಲ್ಲ ಎನ್ನುವ ಸ್ಥಿತಿ ಬಿಟ್ಟರೆ ಅಜ್ಜಂಪುರ, ಯಗಟಿ, ಲಿಂಗದಹಳ್ಳಿ ಸೇರಿದಂತೆ ಗ್ರಾಮಗಳಿಗೆ ತೆರಳುವುದೆಂದರೆ ನರಕ ದರ್ಶನ ಮತ್ತು ಧೂಳಿನ ಸ್ನಾನ ಖಚಿತ, ಮಳೆಗಾಲವಾದರೆ ಜಾರಿಬೀಳುವ ಅಪಾಯ ಇದ್ದೇ ಇರುತ್ತದೆ.
ಬೀರೂರಿನಿಂದ ಯಗಟಿಗೆ ಸುಮಾರು 23ಕಿ.ಮೀ. ಇದ್ದು ಈ ದಾರಿಯನ್ನು ನೀವು ಎಂತಹ ಸುಸಜ್ಜಿತ ವಾಹನದಲ್ಲಿ ಕ್ರಮಿಸಿದರೂ ಕನಿಷ್ಠ 50ನಿಮಿಷ ಬೇಕು. ಲಿಂಗದಹಳ್ಳಿ ರಸ್ತೆಯಲ್ಲಿ ಗುಂಡಿಯೋ ರಸ್ತೆಯೋ ಎಂಬ ಅನುಮಾನ ಮೂಡುವುದು ಖಂಡಿತ.
ಈ ರಸ್ತೆಗಳು ದುರಸ್ತಿ ಕಂಡು ಯಾವುದೋ ಕಾಲವಾಗಿದ್ದು ಇತ್ತ ಗಮನ ಹರಿಸುವವರೇ ಇಲ್ಲವಾಗಿದೆ. ಅಜ್ಜಂಪುರ ರಸ್ತೆಯನ್ನು ಸದ್ಯದಲ್ಲೇ ವಿಸ್ತರಿಸಲಾಗುವುದು ಎಂದು ಘೋಷಿಸಿ ಸಾಲು ಮರಗಳನ್ನು ಕಡಿದು ಆರೇಳು ತಿಂಗಳು ಕಳೆದರೂ ಒಂದು ಗುಂಡಿಯನ್ನು ಮುಚ್ಚುವ ಕೆಲಸವೂ ಆಗಿಲ್ಲ. ಲಿಂಗದಹಳ್ಳಿ ರಸ್ತೆ ದೇವನಕೆರೆ ಏರಿಯಿಂದ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ. ಆದರೆ ಮಳೆ ಕಡಿಮೆ ಆಗಿದ್ದರಿಂದ ರಸ್ತೆ ಇನ್ನೂ ಉಳಿದಿದೆ ಎನ್ನುವುದು ಸಂಚರಿಸುವವರ ಅಭಿಪ್ರಾಯವಾಗಿದೆ.
ಇನ್ನು ಹುಲ್ಲೇಹಳ್ಳಿಗೆ ವಿಶೇಷ ಅನುದಾನ ದಲ್ಲಿ ಇತ್ತೀಚೆಗೆ ಮಣ್ಣಿನ ರಸ್ತೆ ನಿರ್ಮಿ ಸಿದೆ,ಹೂವಿನಹಳ್ಳಿ,ಕೋಡಿಹಳ್ಳಿ ಸಂಪರ್ಕ ರಸ್ತೆಗೆ ಚಾಲನೆ ನೀಡಲಾಗಿದೆ ಇವು ಯಾವ ರೀತಿ ತಯಾರಾಗುತ್ತವೆ ಕಾದು ನೋಡಬೇಕಿದೆ.
ಇಂಗ್ಲಾರನಹಳ್ಳಿಗೆ ಈ ಹಿಂದೆ ನಿರ್ಮಿಸಿದ ರಸ್ತೆ ಉತ್ತಮವಾಗಿದೆ ಆದರೆ ಗಾಳಿಹಳ್ಳಿ ರಸ್ತೆ ಭಾಗ್ಯ ಕಂಡು ದಶಕಗಳೇ ಕಳೆದಿದೆ ಜೋಡಿತಿಮ್ಮಾಪುರ ಪ್ರವೇಶಿಸಲು ಉತ್ತಮ ರಸ್ತೆ ಸಿಗುತ್ತದೆ ಆದರೆ ಗ್ರಾಮದ ಒಳಗೆ ದೇವರಿಗೇ ಪ್ರೀತಿ.
ಈ ಕುರಿತು ಗ್ರಾಮಸ್ಥರನ್ನು ವಿಚಾರಿಸಿದರೆ ಮತ ಕೇಳಲು ಬರುವ ಪಂಚಾಯಿತಿ ಸದಸ್ಯನಿಂದ ಹಿಡಿದು ಶಾಸಕರವರೆಗೆ ಚುನಾ ವಣೆ ನಂತರ ಇತ್ತ ತಿರುಗಿ ನೋಡುವುದಿಲ್ಲ.
ಬೀರೂರು ಪಟ್ಟಣದ ರಸ್ತೆಗಳು ಪುರಸಭೆ ಆಡಳಿತದಲ್ಲಿ ನಿರ್ಮಾಣಗೊಂಡು ವರ್ಷ ಕಳೆಯುವುದರೊಳಗೆ ಸಂಪೂರ್ಣ ಹಾಳಾ ಗುತ್ತಿರುವುದಕ್ಕೆ ಯಾರನ್ನು ದೂರ ಬೇಕೋ ಗೊತ್ತಿಲ್ಲ,ಆಗಾಗ ರಸ್ತೆಗಳು ನಿರ್ಮಾಣ ಆಗುತ್ತವೆ ಆದರೆ ಮಾಡಿದ ರಸ್ತೆಯನ್ನೇ ಪುರ್ನ ನಿರ್ಮಾಣ ಮಾಡ ಲಾಗುತ್ತದೆ. ಅವಶ್ಯವಿರುವಲ್ಲಿ ರಸ್ತೆಗಳು ಇಲ್ಲ ಕೇಳುವುದು ಯಾರನ್ನು? ಎನ್ನುವುದು ಜನರ ಪ್ರಶ್ನೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.