ಅಜ್ಜಂಪುರ: ಮಕ್ಕಳಿಗಳಿಗೆ ನೀಡುವ ಆಹಾರದ ಗುಣಮಟ್ಟ ಕಾಪಾಡಿ, ಶುದ್ಧ ಕುಡಿಯುವ ನೀರು ಒದಗಿಸಿ, ಮನೆಪಾಠ ವ್ಯವಸ್ಥೆ ಮಾಡಿ, ಹಾಸ್ಟೆಲ್ ಒಳಗಿನ ಮತ್ತು ಹೊರಗಿನ ಸ್ವಚ್ಛಗೊಳಿಸಿ ಎಂದು ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್ ಮೆಟ್ರಿಕ್ ಪೂರ್ವ ಹಾಸ್ಟೆಲ್ ವಾರ್ಡ್ನ್ ಗಿರೀಶ್ ಅವರಿಗೆ ಆದೇಶಿಸಿದರು.
ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಸ್ವಪ್ರೇರಣೆ ಯಿಂದ ಶುಕ್ರವಾರ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಂದ ಸಮಸ್ಯೆ ಆಲಿಸಿದರು.
ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿದಾಗ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಕಟ್ಟಡ ಸೋರುತ್ತೆ, ವಿದ್ಯುತ್ ಸಂಪರ್ಕ ಸರಿಯಿಲ್ಲದೇ ವಿದ್ಯುತ್ ಶಾಖ್ ಹೊಡೆಯುತ್ತದೆ, ಕ್ರೀಡಾಸಾಮಗ್ರಿಗಳ ವ್ಯವಸ್ಥೆಯಿಲ್ಲ, ಗ್ರಂಥಾಲಯದಿಂದ ಈವರೆಗೂ ಪುಸ್ತಕ ನೀಡಿಲ್ಲ ಎಂಬ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಖುದ್ದು ಹಾಜ ರಿದ್ದು, ವಿದ್ಯಾರ್ಥಿನಿಲಯದ ಪರಿಸರ ಸ್ವಚ್ಛಮಾಡಿಸಿ, ಮಾಹಿತಿ ನೀಡುವಂತೆ ಆದೇಶಿಸಿದರು.
ನಾಡ ಕಚೇರಿಗೆ ಭೇಟಿ ನೀಡಿದಾಗ ಶಿಥಿಲಾವಸ್ಥೆಯಲ್ಲಿರುವ ಕೊಠಡಿಯಲ್ಲಿ ದಾಖಲೆಗಳನ್ನಿರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಬೇರೆಡೆ ವರ್ಗಾಯಿಸುವಂತೆ ಉಪತಹಶೀಲ್ದಾರ್ಗೆ ಸೂಚಿಸಿದರು. ಸಾರ್ವಜನಿಕರು ಯಾವುದೇ ದೂರು ನೀಡಲಿಲ್ಲ. ಪಿಡಿಒ ಚೇತನ್ ಅವರಿಂದ ಗ್ರಾಮಪಂಚಾಯಿತಿ ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿ ಪಡೆದರು.