ಬಸವಕಲ್ಯಾಣ: ಸೆಪ್ಟೆಂಬರ್ 20 ರಂದು ಬೆಳಗಿನ ಜಾವ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡ ಇಲ್ಲಿನ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಚೇತರಿಸಿಕೊಳ್ಳುತ್ತಿದ್ದರೂ ಇಲ್ಲಿ ದಿನಕ್ಕೊಂದು ಊಹಾಪೋಹ ಹಬ್ಬುತ್ತಿದೆ. ಅವರಿಗೆ ಏನಾಗಿದೆ ಎಂಬುದರ ಬಗ್ಗೆ ಗೊತ್ತಿಲ್ಲದ ಜನರು ಇಲ್ಲದೊಂದು ಕತೆಕಟ್ಟಿ ಮಾತನಾಡುತ್ತಿರುವುದು ಕಂಡು ಬರುತ್ತಿದೆ.
ಮುಖ್ಯವೆಂದರೆ, ಅವರನ್ನು ಚಿಕಿತ್ಸೆಗಾಗಿ ಸೇರ್ಪಡೆ ಮಾಡಲಾದ ಹೈದ್ರಾಬಾದ್ನ ಅಪೊಲೊ ಆಸ್ಪತ್ರೆಯಲ್ಲಿ ಅಟ್ಟೂರ್ ಅವರ ಆಪ್ತ ಸಹಾಯಕ ಮತ್ತು ಒಂದಿಬ್ಬರು ಸಂಬಂಧಿಕರನ್ನು ಬಿಟ್ಟರೆ ಬೇರೆ ಯಾರನ್ನೂ ಪ್ರವೇಶಿಸಲು ಬಿಡುತ್ತಿಲ್ಲ. ಹೀಗಾಗಿ ಅನೇಕ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಲ್ಲಿಗೆ ಭೇಟಿ ಕೊಡುತ್ತಿದ್ದಾರಾದರೂ ಅವರಿಗೆ ಏನೂ ಗೊತ್ತಾಗುತ್ತಿಲ್ಲ. ಅದ್ದರಿಂದ ಅವರು ವಾಪಸ್ಸು ಬಂದು ಏನಾದರೊಂದು ಹೇಳುತ್ತಿರುವುದರಿಂದ ಯಾರಿಗೂ ನಿಜವಾದ ಮಾಹಿತಿ ದೊರಕುತ್ತಿಲ್ಲ.
ಏನಾಗಿದೆ: ಅಂದು ಅಟ್ಟೂರ್ ಅವರು ಬೆಂಗಳೂರಿಗೆ ಹೋಗುವುದಕ್ಕಾಗಿ ಹೈದ್ರಾಬಾದ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅವರು ಹೋಗುತ್ತಿದ್ದ ಇನ್ನೋವಾ ಕಾರು ಸೇತುವೆಯ ಕಬ್ಬಿಣದ ಪಟ್ಟಿಗೆ ಡಿಕ್ಕಿ ಹೊಡೆದಿದ್ದರಿಂದ ಅದು ತುಂಡಾಗಿ ಅದರ ಒಂದು ತುದಿ ಕಾರಿನ ಒಳಗೆ ಹಿಂದುಗಡೆಯ ಸೀಟಿನವರೆಗೆ ನುಗ್ಗಿದೆ. ಅದು ಸ್ವಲ್ಪ ಮೇಲ್ಭಾಗದಲ್ಲಿ ಸೇರುತ್ತಿದ್ದರೆ ಒಳಗಡೆಯ ಜನರು ನಿಸ್ಸಂಶಯವಾಗಿ ಅರ್ಧರ್ಧ ತುಂಡಾಗುತ್ತಿದ್ದರು.
ಆದರೆ ಹಾಗಾಗದೆ ಹಿಂದಿನ ಸೀಟಿನಲ್ಲಿ ಮಲಗಿದ್ದ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರ ತಲೆ ಮೇಲಕ್ಕೆ ಎತ್ತಿ ಬಡಿದಿದೆ. ಹೀಗಾಗಿ ತಲೆಯ ಹಿಂದುಗಡೆ ಬಲವಾದ ಪೆಟ್ಟಾಗಿದೆ. ಈ ಕಾರಣ ನರಗಳಿಗೆ ಹಾನಿ ಆಗಿದ್ದರಿಂದ ಕೆಲ ದಿನಗಳವರೆಗೆ ಕೈ ಕಾಲುಗಳ ಚಲನವಲನ ನಿಂತು ಹೋಗಿ ಮಲಗಿದಲ್ಲಿಂದ ಏಳಲಾಗದಂತಹ ಪರಿಸ್ಥಿತಿ ಇತ್ತು. ಬರೀ ಬೆರಳುಗಳು ಅಲುಗಾಡುವುದು ಬಿಟ್ಟರೆ ಕೈ, ಕಾಲು ಮೇಲಕ್ಕೆ ಎತ್ತಲು ಆಗುತ್ತಿರಲಿಲ್ಲ ಎನ್ನಲಾಗಿದೆ.
ಆದರೆ ನಾಲ್ಕು ದಿನಗಳ ಹಿಂದೆ ಹಾನಿಗೊಂಡ ನರಗಳ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ನಿನ್ನೆಯಿಂದ ಅವರು ಎದ್ದು ಕುಳಿತುಕೊಳ್ಳುತ್ತಿದ್ದಾರೆ. ಬ್ರೇಡ್ ಸೇವಿಸುತ್ತಿದ್ದಾರೆ ಎಂದು ಆಪ್ತ ಸಹಾಯಕ ಸೂರ್ಯಕಾಂತ ಪಾಟೀಲ ತಿಳಿಸಿದ್ದಾರೆ. ಒಂದು ಕಣ್ಣಿಗೆ ಪೆಟ್ಟಾಗಿದ್ದರಿಂದ ಅದರ ಶಸ್ತ್ರಚಿಕಿತ್ಸೆಯೂ ನಡೆದಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.