ಕಾರವಾರ: ‘ಅಡಿಕೆ ಬಗ್ಗೆ ಮಾತನಾಡಲು ಕೇಂದ್ರದ ಹೆಚ್ಚುವರಿ ಪ್ರಧಾನ ಕಾನೂನು ಸಲಹೆಗಾರ್ತಿ ಇಂದಿರಾ ಜೈಸಿಂಗ್ ಸರ್ಕಾರವೂ ಅಲ್ಲ, ಸರ್ವಜ್ಞರೂ ಅಲ್ಲ. ಅಡಿಕೆ ನಿಷೇಧ ಕುರಿತು ಅವರ ಹೇಳಿಕೆ ಬಗ್ಗೆ ಮಲೆನಾಡಿನ ರೈತರು ತಲೆ ಕೆಡಿಸಿ ಕೊಳ್ಳಬಾರದು’ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
‘ಟಾಟಾ ಸಂಸ್ಥೆ ನೀಡಿದ ವರದಿ ಆಧರಿಸಿ ಇಂದಿರಾ ಮಾತನಾಡಿದ್ದಾರೆ. ಆದರೆ, ಅಡಿಕೆಯಲ್ಲಿ ಮನುಷ್ಯನ ದೇಹಕ್ಕೆ ಹಾನಿಕರ ಅಂಶ ಇವೆಯೇ ಎಂಬ ಬಗ್ಗೆ ಸಂಶೋಧನೆ ನಡೆಸಿದ ಮೈಸೂರಿನ ಸಿಎಫ್ಟಿಆರ್ಐ ಹಾಗೂ ಕೇಂದ್ರಿಯ ತೋಟಗಾರಿಕಾ ಸಂಶೋಧನಾ ಕೇಂದ್ರ ನಡೆಸಿದ ಅಧ್ಯಯನಗಳಲ್ಲಿ ಅಡಿಕೆ ಹಾನಿ ಕಾರಕ ಬೆಳೆ ಅಲ್ಲ ಎಂದು ನೀಡಿವೆ. ಇಂದಿರಾ ಈ ವರದಿ ಪರಿಗಣಿಸಬೇಕಿತ್ತು’ ಎಂದು ಗುರುವಾರ ಇಲ್ಲಿ ಹೇಳಿದರು.
ಇಲ್ಲಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಇಂದಿರಾ, ‘ಅಡಿಕೆ ಹಾನಿಕರ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿದ್ದು ನಿಜ’ ಎಂದು ಹೇಳಿದ್ದರು.