ಹೆಬ್ರಿ: ದೇಶದಲ್ಲಿ ಅಡಿಕೆ ನಿಷೇಧ ಮಾಡುವ ಪ್ರಸ್ತಾಪವೇ ಸರ್ಕಾರದ ಮುಂದಿರಲಿಲ್ಲ ಬಿಜೆಪಿಯವರು ಮೋಸದ ರಾಜಕೀಯ ಮಾಡಿ ಮತ ಪಡೆಯಲು ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.
ಅವರು ಮಂಗಳವಾರ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿ, ಕೃಷಿಕರು ಮತ್ತು ಅಡಿಕೆ ಬೆಳೆಗಾರರ ಹಿತವನ್ನು ಕಾಂಗ್ರೆಸ್ ಹಿಂದಿನಿಂದಲೂ ಕಾಯುತ್ತಿದ್ದು ಮುಂದೆಯೂ ಕಾಂಗ್ರೆಸ್ ಕೃಷಿಕರ ಪರವಾಗಿದೆ. ಅಡಿಕೆ ಅಮದು ಸುಂಕ ಕೇಂದ್ರ ಸರ್ಕಾರ ಹೆಚ್ಚು ಮಾಡಿದ್ದು, ಇದೀಗ ಕೆಜಿಗೆ ಸುಮಾರು ₨100 ರೂಪಾಯಿ ಇದೆ. ಸಂಸದ ಜಯಪ್ರಕಾಶ ಹೆಗ್ಡೆ ಅವರು ಅಡಿಕೆಯ ಆಮದು ಸುಂಕ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೊಯಿಲಿ ಹೇಳಿದರು.
ಕಸ್ತೂರಿ ರಂಗನ್ ವರದಿ ಸಮಸ್ಯೆ ಇಲ್ಲ: ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವನಾದ ತಾನೂ ಕಸ್ತೂರಿ ರಂಗನ್ ವರದಿಯ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಲು ಕರ್ನಾಟಕ ರಾಜ್ಯಕ್ಕೆ ಸೂಚನೆ ನೀಡಿದ್ದು, ಸಮಗ್ರ ಅಧ್ಯಯನ ನಡೆಯುತ್ತಿದೆ. ಕೋಟ್ಯಂತರ ಸಾವಿರ ರೂಪಾಯಿ ಯೋಜನೆಗಳ ಲಾಭ ಈ ಪ್ರದೇಶದ ಜನತೆಗೆ ದೊರೆಯಲಿದೆ ಹೊರತು ಯಾವುದೇ ತೊಂದರೆ ಆಗುವುದಿಲ್ಲ ಬಿಜೆಪಿ ರಾಜಕೀಯಕೊಸ್ಕರ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದರು.
ಅರಣ್ಯ ಸಚಿವ ರಮಾನಾಥ ರೈ ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಕಸ್ತೂರಿ ರಂಗನ್ ವರದಿಯ ಬಗ್ಗೆ ವಿವರವಾಗಿ ಅಧ್ಯಯನ ನಡೆಸಲಿದೆ ಜನತೆ ಆತಂಕ ಪಡುವ ಪ್ರಶ್ನೆಯೇ ಇಲ್ಲ ಎಂದು ಮೊಯಿಲಿ ಹೇಳಿದರು.
ಅಲೆಯೂ ಇಲ್ಲ ಮೊಸರು ಇಲ್ಲ: ‘ಅಲೆಯೂ ಇಲ್ಲ ಮೊಸರು ಇಲ್ಲ.... ಮೋದಿ ಅಲೆ ಕೃತಕ ಸೃಷ್ಟಿ ಕೋಟ್ಯಂತರ ರೂಪಾಯಿ ವ್ಯಯಿಸಿ ಮೋದಿ ಅಲೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ನಗರಾಭಿವೃದ್ದಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಕೆಪಿಸಿಸಿ ಸದಸ್ಯ ಎಚ್.ಗೋಪಾಲ ಭಂಡಾರಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಬಲ್ಲಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಇದ್ದರು.