ಪುತ್ತೂರು: ಅಡಿಕೆ ನಿಷೇಧ ಮಾಡಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀತಿಯನ್ನು ಮತ್ತು ಅಡಿಕೆ ಬೆಳೆಗಾರರ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಬಿಜೆಪಿ ಕ್ಷೇತ್ರ ಸಮಿತಿಯ ವತಿಯಿಂದ ಬಿಜೆಪಿ ರೈತ ಮೋರ್ಚಾದ ನೇತೃತ್ವದಲ್ಲಿ ಸೋಮವಾರ ಪುತ್ತೂರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರಗತಿಪರ ಕೃಷಿಕ ಜನಾರ್ಧನ ಭಟ್ ಸೇಡಿಯಾಪು ಅವರು ಮಾತನಾಡಿ, ಇಂದು ಸರ್ಕಾರ ಅಡಿಕೆಯನ್ನು ನಿಷೇಧ ಮಾಡಲು ಹೊರಟಿದೆ. ಅಡಿಕೆಯನ್ನು ನಿಷೇಧಿಸಲು ಯಾವ ವಿದೇಶಿ ಸಿಗರೇಟು ಕಂಪೆನಿಗಳು ಕೇಂದ್ರ ಸರ್ಕಾರದ ಮಂತ್ರಿಗಳಿಗೆ ಎಷ್ಟು ಕೋಟಿ ರೂಪಾಯಿಯನ್ನು ಜೇಬಿಗೆ ಹಾಕಿದ್ದಾರೆ ಎಂಬುದನ್ನು ನಾವು ಪ್ರಶ್ನಿಸಬೇಕಾಗಿದೆ ಎಂದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಮಾತನಾಡಿ, ಅಡಿಕೆ ಬೆಳೆಗಾರರ ದಾರಿತಪ್ಪಿಸುವ ಪ್ರ್ರಯತ್ನ ನಡೆಸುತ್ತಿದೆ ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಮಾತನಾಡಿ, ಆರೋಗ್ಯ ಇಲ್ಲದಂತಹ ಕೇಂದ್ರದ ಆರೋಗ್ಯ ಇಲಾಖೆಯ ಕಾರಣದಿಂದ ಇಂದು ಅಡಿಕೆ ಬೆಳೆಗಾರ ದಾರಿಯಲ್ಲಿ ಬಿದ್ದು ಹೊರಲಾಡುವ ಸ್ಥಿತಿ ಬಂದಿದೆ ಎಂದರು. ಕೇಂದ್ರ ಸರ್ಕಾರ ಕೋಮಾದಲ್ಲಿದ್ದರೆ ರಾಜ್ಯ ಸರ್ಕಾರ ಮತಿಭ್ರಮಣೆಯಲ್ಲಿದೆ ಎಂದರು.
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮಾತನಾಡಿ, ಅಡಿಕೆ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಅಡಿಕೆ ಬೆಳೆಗಾರರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸರ್ಕಾರಗಳು ಸರ್ವನಾಶ ಮಾಡಲು ಹೊರಟಿವೆ ಎಂದರು.
ನಮೋ ಭಾರತದ ಗೌರವಾಧ್ಯಕ್ಷ ಡಾ.ಎಂ.ಕೆ ಪ್ರಸಾದ್ ಭಂಡಾರಿ, ತಾ.ಪಂ.ಅಧ್ಯಕ್ಷೆ ಶಶಿಪ್ರಭಾ ಸಂಪ್ಯ, ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಸಾಜ ರಾಧಾಕೃಷ್ಣ ಆಳ್ವ, ಶಂಭುಭಟ್, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ ಭಂಡಾರಿ, ರಾಜ್ಯ ಸಮಿತಿ ಸದಸ್ಯ ಸುರೇಶ್ ಆಳ್ವ ಸಾಂತ್ಯ, ತಾ.ಪಂ. ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಬೂಡಿಯಾರ್ ರಾಧಾಕೃಷ್ಣ ರೈ, ಶೈಲಜಾ ಭಟ್, ಪ್ರಮೀಳ ಜನಾರ್ದನ ಇದ್ದರು.
ನಾಟಕ ಕಂಪೆನಿ
ಈ ಹಿಂದೆ ಸಿನಿಮಾದಲ್ಲಿ ಮುದುಕಿಯ ಪಾತ್ರದಲ್ಲಿ ನಟಿಸಿದ್ದ ಶಾಸಕಿಯವರು ಇದೀಗ ಬೀದಿ ನಾಟಕ ಕಂಪನಿ ಆರಂಭಿಸಿದ್ದಾರೆ. ಆದರೆ ಈಗಿನ ಡೊಂಬರಾಟ ನಾಟಕ ಕಂಪನಿಯಲ್ಲಿ ಎಲ್ಲರೂ ನಾಯಕರೇ ಆಗಿದ್ದು ,ನಿರ್ದೇಶಕರು ಯಾರೂ ಇಲ್ಲ. ಇದೀಗ ಅವರ ನಾಟಕ ಎಲ್ಲರಿಗೂ ಅರ್ಥವಾಗಿದೆ ಎಂದು ಮಠಂದೂರು ಲೇವಡಿ ಮಾಡಿದರು.
ಬದನೆ -ಕೆಂಬುಡೆಯಲ್ಲಿ ನಂಜಿದೆ, ಕೆಸುವು -ಸುವರ್ಣಗಡ್ಡೆ ತುರಿಸುತ್ತೆ, ಹಾಗೆಂದು ಈ ಆಹಾರಗಳು ಹಾನಿಕಾರಕ ಅಲ್ಲ. ಬದನೆಗೆ ಹರಸಿನ ಹಾಕಿದರೆ ನಂಜಿನಾಂಶ ಹೊರಟು ಹೋಗುತ್ತದೆ. ಕೆಸುವು ಪದಾರ್ಥ ಮಾಡಿದ ಬಳಿಕ ತುರಿಸುವ ಅಂಶವನ್ನು ಕಳಕೊಳ್ಳುತ್ತದೆ. ಹಾಗೆಯೇ ಅಡಿಕೆಗೆ ಸುಣ್ಣ, ವೀಳ್ಯದೆಲೆ ಸೇರಿಸಿದರೆ ಅದು ಔಷಧೀಯ ಗುಣವನ್ನು ಪಡೆಯುತ್ತದೆ. ಹಾನಿಕಾರಕ ಎಂಬುವುದು ಬಳಸುವ ರೀತಿಯಲ್ಲಿರುತ್ತದೆ. ಹೀಗಿರುವಾಗ ಅವುಗಳನ್ನು ಹಾನಿಕಾರ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಪ್ರಗತಿಪರ ಕೃಷಿಕ ಜನಾರ್ದನ ಭಟ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.