ಬೆಂಗಳೂರು: ‘ಅಡಿಕೆಯ ಕುರಿತು ನೈಜವಾದ ಸಂಶೋಧನಾ ವರದಿಗಳನ್ನು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಆರೋಗ್ಯ ಸಚಿವಾಲಯವು ಮೊದಲು ಅಡಿಕೆ ಮಿಶ್ರಿತ ತಂಬಾಕು ತಿಂದರೆ ಕ್ಯಾನ್ಸರ್ ಬರುತ್ತದೆಯೆಂದು ಹೇಳಿದ್ದು, ಈಗ ಬರೀ ಅಡಿಕೆ ಸೇವನೆಯಿಂದಲೂ ಕ್ಯಾನ್ಸರ್ಗೆ ತುತ್ತಾಗಬೇಕಾಗುತ್ತದೆ ಎಂದು ಹೇಳಿಕೆ ನೀಡಿದೆ. ಈ ಹೇಳಿಕೆಯು ಅವೈಜ್ಞಾನಿಕವಾಗಿದೆ’ ಎಂದರು.
‘ಜವಾಹರ್ಲಾಲ್ ವಿಶ್ವವಿದ್ಯಾಲಯದ ಕ್ಯಾನ್ಸರ್ ಬಯಾಲಜಿ ಸಂಶೋಧನಾ ಕೇಂದ್ರವು ಅಡಿಕೆಯ ಬಗೆಗೆ ಸಂಶೋಧನೆ ಕೈಗೊಂಡು ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುವುದಿಲ್ಲ ವೆಂದು ದಾಖಲೆಗಳನ್ನು ನೀಡಿದೆ’ ಎಂದರು.
‘ಸಂಶೋಧನಾ ಕೇಂದ್ರದ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಬೇಕು. ಅಡಿಕೆಯ ಬಗೆಗಿರುವ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಬೇಕು. ಜನತೆಗೆ ತಪ್ಪು ಮಾಹಿತಿ ರವಾನಿಸುವುದನ್ನು ತಪ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.