ಶಿರಸಿ: `ಅಡಿಕೆ ಬೆಲೆ ಸ್ಥಿರತೆ ಬಗ್ಗೆ ಬೆಳೆಗಾರರಲ್ಲಿ ಆತಂಕ ಬೇಡ. ಸಹಕಾರಿ ಸಂಸ್ಥೆಗಳು ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಪಾಡುತ್ತವೆ' ಎಂದು ಸಹಕಾರಿ ಸಂಸ್ಥೆಗಳು ಪ್ರಮುಖರು ಬೆಳೆಗಾರರಿಗೆ ಭರವಸೆ ನೀಡಿದ್ದಾರೆ.
ಪ್ರಮುಖ ಅಡಿಕೆ ವಹಿವಾಟು ಸಂಸ್ಥೆ ಮುಖ್ಯಸ್ಥರಾದ `ಕ್ಯಾಂಪ್ಕೋ' ಅಧ್ಯಕ್ಷ ಕೊಂಕೋಡಿ ಪದ್ಮನಾಭ, `ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ' ಅಧ್ಯಕ್ಷ ಶಾಂತಾರಾಮ ಹೆಗಡೆ, `ಶಿರಸಿ ಟಿಎಂಎಸ್' ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
`ಪ್ರಸಕ್ತ ವರ್ಷ ಅಡಿಕೆ ಉತ್ಪಾದನೆ ಕುಂಠಿತವಾಗಿದ್ದು, ದಾವಣಗೆರೆ, ಬೀರೂರು ವ್ಯಾಪ್ತಿಯಲ್ಲಿ ಸಾಕಷ್ಟು ಮರಗಳು ನಾಶವಾಗಿವೆ. ಕೇರಳದಲ್ಲಿ ಅಡಿಕೆ ಭೂಮಿಯನ್ನು ರಬ್ಬರ್ ಆಕ್ರಮಿಸಿದೆ. ಮುಂದಿನ ಹಂಗಾಮಿನಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಈಗಿನ ದರವನ್ನೇ ಕಾಯ್ದುಕೊಳ್ಳುವ ಭರವಸೆ ಇದೆ' ಎಂದರು.