ಸಿದ್ದಾಪುರ: ತಾಲ್ಲೂಕಿನ ಹಾರ್ಸಿಕಟ್ಟ ಸಮೀಪದ ಊರತೋಟ ಎಂಬ ಹಳ್ಳಿಯಲ್ಲಿ ಅಡಿಕೆಗೆ ಭಾರಿ ಪ್ರಮಾಣದಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು, ರೈತರನ್ನು ಕಂಗಾಲು ಮಾಡಿದೆ.
ಈ ಊರಿನಲ್ಲಿ ಸುಮಾರು 10ಕ್ಕಿಂತ ಹೆಚ್ಚು ರೈತರಿದ್ದು, ಎಲ್ಲರೂ ಅಡಿಕೆ ಬೆಳೆಯನ್ನೇ ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ. ಒಟ್ಟು ಸುಮಾರು 12 ಎಕರೆಯಷ್ಟು ಅಡಿಕೆ ತೋಟ ಈ ಊರಿನಲ್ಲಿದೆ. ಇಲ್ಲಿನ ಬಹುತೇಕ ರೈತರು ಸಣ್ಣ ಹಿಡುವಳಿದಾರರು.
ಈಗ ಪ್ರತಿದಿನವೂ ಪ್ರತಿಯೊಬ್ಬ ಬೆಳೆಗಾರರ ತೋಟದಲ್ಲಿಯೂ ಚೀಲಗಟ್ಟಲೆ ಅಡಿಕೆ ಕೊಳೆರೋಗದಿಂದ ಉದುರುತ್ತಿವೆ.
ಮಳೆಗಾಲದ ಪ್ರಾರಂಭದಲ್ಲಿಯೆ ಅಡಿಕೆಗೆ `ಮದ್ದು~ (ಬೋರ್ಡೋ ಮಿಶ್ರಣ ಅಥವಾ ಬಯೋಫೈಟ್) ಸಿಂಪರಣೆಯನ್ನು ಇವರು ಮಾಡಿದ್ದಾರೆ. ಕೆಲವರು ಎರಡನೇ ಸಾರಿಯೂ ಅಡಿಕೆ ಬೆಳೆಗೆ ಮದ್ದು ಹೊಡೆಸುತ್ತಿದ್ದಾರೆ.
`ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮತ್ತು ಈಚೆಗೆ ಕಾಣಿಸಿಕೊಂಡಿದ್ದ ಬಿಸಿಲು ಮತ್ತು ಮಳೆಯ ವಾತಾವರಣದ ಕಾರಣದಿಂದ ಕೊಳೆರೋಗ ಭಾರಿ ಪ್ರಮಾಣದಲ್ಲಿ ವ್ಯಾಪಿಸಿದೆ~ ಎನ್ನುತ್ತಾರೆ ಸ್ಥಳೀಯರಾದ ಸತ್ಯನಾರಾಯಣ ಹೆಗಡೆ, ಭಾಸ್ಕರ ಹೆಗಡೆ, ರಾಘವ ಹೆಗಡೆ, ಶ್ರೀಪತಿ ಹೆಗಡೆ, ಮಂಜುನಾಥ ಹೆಗಡೆ ಮತ್ತಿತರರು ರೈತರು.
ಈ ಕೊಳೆರೋಗದಿಂದ ಉಂಟಾಗಿರುವ ಹಾನಿಯ ಸಮೀಕ್ಷೆಯನ್ನು ಸರ್ಕಾರ ಮಾಡಬೇಕು.
ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಊರತೋಟದ ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.