ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಮತ್ತು ಎನ್.ಆರ್.ಪುರ ತಾಲ್ಲೂಕುಗಳಲ್ಲಿ ಅಡಿಕೆ ತೋಟಕ್ಕೆ ಬಾಧಿಸಿರುವ ಹಳದಿ ರೋಗ ನಿಯಂತ್ರಣ ಹಾಗೂ ಇದರಿಂದ ತೊಂದರೆಗೆ ಒಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ `ಕ್ಯಾಂಪ್ಕೊ~ ಸಂಸ್ಥೆಯ ವತಿಯಿಂದ ಸೋಮವಾರ ನಗರಕ್ಕೆ ಆಗಮಿಸಿದ್ದ ತೋಟಗಾರಿಕಾ ಸಚಿವ ಎಸ್.ಎ.ರವೀಂದ್ರನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ಈ ಮನವಿ ಸಲ್ಲಿಸಿ, ಕ್ಯಾಂಪ್ಕೊದಿಂದ ತಯಾರಿಸಲಾದ ಅಡಿಕೆ ಸುಲಿಯುವ ಯಂತ್ರಕ್ಕೆ ಶೇ 50ರ ಸಬ್ಸಿಡಿ ನೀಡುವಂತೆ ಸಹ ಒತ್ತಾಯಿಸಿದರು.
ಮುಂದಿನ ನವೆಂಬರ್ 2ರಿಂದ 4ರವರೆಗೆ `ಅಡಿಕೆ ಯಂತ್ರ ಮೇಳ-2012~ ನಡೆಯಲಿದ್ದು, ಅದಕ್ಕೆ ಸರ್ಕಾರ 50 ಲಕ್ಷ ರೂಪಾಯಿ ಅನುದಾನ ನೀಡಬೇಕು ಹಾಗೂ ಈಗಾಗಲೇ ಮಂಜೂರಾತಿ ಬಾಕಿ ಇರುವ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆಯೂ ಅವರು ಆಗ್ರಹಿಸಿದರು.
ವಿಧಾನಸಭೆ ಉಪಾಧ್ಯಕ್ಷ ಎನ್. ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕ್ಯಾಂಪ್ಕೊ ಉಪಾಧ್ಯಕ್ಷ ಕೆ.ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಭಟ್, ನಿರ್ದೇಶಕರಾದ ಸಂಜೀವ ಮಟಂದೂರು, ಕರುಣಾಕರನ್ ನಂಬಿಯಾರ್, ಶ್ರೀಹರಿ ಭಟ್, ರಾಜಗೋಪಾಲ್, ಮಹಾಪ್ರಬಂಧಕ ಸುರೇಶ್ ಭಂಡಾರಿ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.