ಮಂಡ್ಯ: ಅಡುಗೆ ಅನಿಲ ಸಿಲಿಂಡರ್ಗಾಗಿ ನಗರದ ನಾಗರಿಕರು ತೀವ್ರವಾಗಿ ಪರದಾಡುತ್ತಿದ್ದಾರೆ. ಮನೆಯಲ್ಲಿ ಸಿಲಿಂಡರ್ ಖಾಲಿಯಾಗಿದೆ ಎಂದರೆ ಸಾಕು ಜನರು ಬೆಚ್ಚಿ ಬೀಳುತ್ತಾರೆ.
ಸಿಲಿಂಡರ್ ತೆಗೆದುಕೊಂಡ 30 ದಿನಗಳ ನಂತರ ಹೊಸದ ಕ್ಕಾಗಿ ಹೆಸರು ನೋಂದಾಯಿಸಬೇಕು. ಅದಾದ ಹದಿನೈದು ದಿನಗಳ ನಂತರ ಸಿಲಿಂಡರ್ ನೀಡಲಾಗುತ್ತದೆ. ಹೀಗಾಗಿ ಅಡುಗೆ ನಿರ್ವಹಣೆಯ ಕೆಲಸ ಮಹಿಳೆಯರಿಗೆ ಕಷ್ಟವಾಗಿದೆ. ಸಿಲಿಂಡರ್ಗಾಗಿ ಗ್ಯಾಸ್ ಏಜೆನ್ಸಿಗಳಿಗೆ ತಿರುಗಿ, ತಿರುಗಿ ಪುರುಷರಿಗೆ ಸಾಕಾಗಿದೆ.
ಎಂಟು ತಿಂಗಳ ಹಿಂದೆ ಉದ್ಭವಿಸಿರುವ ಸಿಲಿಂಡರ್ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ದಿನದಿಂದ ದಿನಕ್ಕೆ ಬಿಗಡಾಯಿಸು ತ್ತಲೇ ಸಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಮೊದಲು ಸಿಲಿಂಡರ್ ಅನ್ನು ಸಮಯಕ್ಕೆ ಸರಿಯಾಗಿಯೇ ಪೂರೈಸಲಾಗುತ್ತಿತ್ತು. ಕೆಲ ತಿಂಗಳುಗಳ ಹಿಂದೆ ಲಾರಿ ಮುಷ್ಕರದ ಹೆಸರಿನಲ್ಲಿ ಆರಂಭವಾದ ಸಮಸ್ಯೆಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ನಿಜವಾದ ಸಮಸ್ಯೆ ಏನು ಎಂಬುದನ್ನು ಪತ್ತೆ ಹಚ್ಚುವ ಗೋಜಿಗೆ ಅಧಿಕಾರಿಗಳು ಹೋಗುತ್ತಿಲ್ಲ.
ಗೃಹ ಬಳಕೆಯ ಸಿಲಿಂಡರ್ಗಳನ್ನು ಏಜೆನ್ಸಿಯವರು ವಾಣಿಜ್ಯ ಬಳಕೆಗಾಗಿ ಮಾರಾಟ ಮಾಡುತ್ತಿರುವುದರಿಂದ ಗೃಹ ಬಳಕೆಯವರಿಗೆ ಸಮಸ್ಯೆ ಎದುರಾಗಿದೆ ಎಂದು ದೂರುತ್ತಾರೆ ಸಾಲಿನಲ್ಲಿ ಸಿಲಿಂಡರ್ಗೆ ಹೆಸರು ನೋಂದಾಯಿಸಲು ನಿಂತಿದ್ದ ಕೃಷ್ಣೇಗೌಡ.
ಮನೆಯಲ್ಲಿ ನಾಲ್ಕು ಜನರಿದ್ದರೆ ಮೂವತ್ತು ದಿನಗಳಿಗೆ ಸಿಲಿಂಡರ್ ಖಾಲಿಯಾಗುತ್ತದೆ. ಆದರೆ ಇಲ್ಲಿ ನಲವತ್ತೈದು ದಿನ ಗಳವರೆಗೆ ಸಿಲಿಂಡರ್ ನೀಡುವುದಿಲ್ಲ. ವಿದ್ಯುತ್ ಒಲೆಗಳನ್ನು ತೆಗೆದುಕೊಂಡರೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಸಮಸ್ಯೆ ಹಾಗೆಯೇ ಮುಂದುವರೆದಿದೆ. ಏನು ಮಾಡಬೇಕು ಎಂಬುದೇ ದೋಚುತ್ತಿಲ್ಲ ಎನ್ನುವುದು ಗ್ರಾಹಕರ ದೂರು.
ಸಿಲಿಂಡರ್ ಸುರಕ್ಷಿತವಾಗಿ ಮನೆಗಳಿಗೆ ತಲುಪಿಸುವ ಹೊಣೆ ಏಜೆನ್ಸಿಗಳದ್ದಾಗಿದೆ. ಆದರೆ ಇಲ್ಲಿ ಮನೆಗೆ ತಲುಪಿಸುವುದನ್ನು ಕೆಲವು ಏಜೆನ್ಸಿಯವರು ಮರತೇ ಬಿಟ್ಟಿದ್ದಾರೆ. ಗ್ರಾಹಕರೇ ಏಜೆನ್ಸಿಗಳ ಮುಂದೆ ಸಾಲಿನಲ್ಲಿ ನಿಂತು ರಶೀದಿ ಪಡೆದುಕೊಳ್ಳ ಬೇಕು. ಅವರೇ ಸಿಲಿಂಡರ್ಗಳನ್ನು ದ್ವಿಚಕ್ರ ವಾಹನಗಳ ಮೇಲೆ ತೆಗೆದುಕೊಂಡ ಹೋಗಬೇಕಾದ ಸ್ಥಿತಿ ಇದೆ. ಅನಾಹುತ ಸಂಭವಿಸುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ಗ್ರಾಹಕರ ಬೇಡಿಕೆಯಷ್ಟು ಸಿಲಿಂಡರ್ಗಳು ಪೂರೈಕೆಯಾ ಗುತ್ತಿಲ್ಲವಾದ್ದರಿಂದ ಸ್ವಲ್ಪ ವಿಳಂಬವಾಗುತ್ತಿದೆ. ಗ್ರಾಹಕರಿಗೆ ನಾವೇನು ಸಿಲಿಂಡರ್ ತೆಗೆದುಕೊಂಡುವಂತೆ ಹೇಳುವುದಿಲ್ಲ. ಆದರೆ ಅವರೇ ಬಂದು ತೆಗೆದುಕೊಂಡು ಹೋಗುತ್ತಾರೆ ಎನ್ನುವುದು ಏಜೆನ್ಸಿಯವರ ವಾದ.
ಮನೆಯಲ್ಲಿ ಸಿಲಿಂಡರ್ ಖಾಲಿಯಾಗಿದೆ. ಕೇಳಿದರೆ ಇಂದು, ನಾಳೆ ತಲುಪಿಸುತ್ತೇವೆ ಎನ್ನುತ್ತಾರೆ ಏಜೆನ್ಸಿಯವರು. ಅಡುಗೆ ಮಾಡದಿದ್ದರೆ ಹೇಗೆ ನಡೆಯುತ್ತದೆ. ನಾವೇ ತೆಗೆದುಕೊಂಡು ಹೋಗುವುದಾದರೆ ಕೊಡುತ್ತಾರೆ. ಆದ್ದರಿಂದ ನಾವೇ ತೆಗೆದುಕೊಂಡು ಹೋಗುತ್ತೇವೆ ಎನ್ನುವುದು ಗ್ರಾಹಕರ ವಾದ.
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಿಲಿಂಡರ್ ಸಮಸ್ಯೆಗೆ ಜಿಲ್ಲಾಡಳಿತ ಪರಿಹಾರ ಒದಗಿಸಬೇಕಿದೆ ಎಂಬುದು ಗ್ರಾಹಕರ ಮನವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.