ಮಾಗಡಿ: `ನಾನು ಮಾಡುವ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಪಡಿಸುವವರಿಗೆ ತಕ್ಕ ಬುದ್ಧಿ ಕಲಿಸುತ್ತೇನೆ. ಬೇಕಾದರೆ ಈ ಮಾತುಗಳನ್ನು ರಕ್ತದಲ್ಲಿ ಬರೆದುಕೊಡುತ್ತೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದರು.
ಇಲ್ಲಿನ ಶಿವಗಂಗೆಯ ಮೇಲಣಗವಿ ಮಠದಲ್ಲಿ ಮಂಗಳವಾರ ನಡೆದ ರೇಣುಕಾಚಾರ್ಯ ಜಯಂತಿ ಹಾಗೂ `ಶಿವಗಂಗಾಶ್ರೀ~ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಹಗಲು ದರೋಡೆಗೆ ಇಳಿದಿದ್ದ ಪುಢಾರಿಗಳನ್ನು ತಡೆಯಲು ಯತ್ನಿಸಿದ್ದೇ ನನಗೆ ಮುಳುವಾಯಿತು~ ಎಂದು ಆತ್ಮಾವಲೋಕನದ ಧಾಟಿಯಲ್ಲಿ ಮಾತನಾಡಿದ ಅವರು, `ಅನ್ಯಾಯದ ವಿರುದ್ಧ ಸಿಡಿದೇಳದಿದ್ದರೆ ವೀರಶೈವ ಸಮಾಜ ಉಳಿಯುವುದಿಲ್ಲ~ ಎಂದು ಕ್ಷಣಕಾಲ ಗದ್ಗದಿತರಾದರು. `ಎತ್ತರದ ಮರಕ್ಕೆ ಕೊಡಲಿ ಏಟು ಬಿದ್ದಿದೆ ನಿಜ ಆದರೆ ಈ ಯಡಿಯೂರಪ್ಪ ಆ ಮರದ ಬುಡಕಡಿಯಲು ಬಿಡುವುದಿಲ್ಲ. ನೀವೂ ಬಿಡಬೇಡಿ~ ಎಂದು ಭಾವಾವೇಶರಾಗಿ ನುಡಿದರು.
`ನನ್ನ ರಾಜಕೀಯ ಬೆಳವಣಿಗೆಗಳ ಸತ್ಯಾಸತ್ಯತೆ ಏನೆಂದು ತಿಳಿಸಲು ರಾಜ್ಯಾದಾದ್ಯಂತ ಪ್ರವಾಸ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲದಿಂದ ಮತ್ತೆ ಅಧಿಕಾರಕ್ಕೆ ಬರುತ್ತೇನೆ. ಕೊನೆಯ ಉಸಿರು ಇರುವವರೆಗೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ವೀರಶೈವ ಸಮುದಾಯದವರು ತೀರಾ ಹಿಂದುಳಿದ ಸಮುದಾಯದವರ ಏಳಿಗೆಗೆ ಶ್ರಮಿಸಬೇಕಿದೆ~ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ `ಶಿವಗಂಗಾಶ್ರೀ~ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ. ಚಿದಾನಂದ ಮೂರ್ತಿ ಅವರು, `ಯಡಿಯೂರಪ್ಪ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದ್ದಾರೆ~ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ಮೇಲಣಗವಿ ಮಠದ ಮಲಯ ಶಾಂತಮುನಿ ಸ್ವಾಮೀಜಿ ಪ್ರಾಸ್ತಾವಿಕ ಭಾಷಣ ಮಾಡಿದರು. ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಸಾನಿಧ್ಯ ವಹಿಸಿದ್ದರು.