ಸಿದ್ದಾಪುರ: ತಾಲ್ಲೂಕಿನ ಅಘನಾಶಿನಿ ಮತ್ತು ಸೋಮ ನದಿಗೆ ಕಿರು ಅಣೆಕಟ್ಟೆ ನಿರ್ಮಾಣ ವಿರೋಧಿಸಿ ಬೃಹತ್ ಜನಜಾಗೃತಿ ಸಭೆಯು ಮಾಣಿಹೊಳೆಯ ಸೇತುವೆ ಮೇಲೆ ಇದೇ 9ರಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ.
ಈ ಹಿಂದೆ ಅಘನಾಶಿನಿ ನದಿಗೆ ಬೃಹತ್ ಅಣೆಕಟ್ಟೆ ಕಟ್ಟುವ ಪ್ರಸ್ತಾಪ ಕೇಳಿ ಬಂದಿದ್ದ ಸಂದರ್ಭದಲ್ಲಿ ಇಲ್ಲಿಯ ಜನರ ವಿರೋಧಕ್ಕೆ ಮಣಿದಿದ್ದ ಸರ್ಕಾರ ಆ ಯೋಜನೆಯಿಂದ ಹಿಂದೆ ಸರಿದಿತ್ತು. ಆದರೆ, ಈಗ ತಾಲ್ಲೂಕಿನ ಹುಲ್ಕುತ್ರಿ ಮತ್ತು ದಂಟಕಲ್ ಸಮೀಪ ಅನುಕ್ರಮವಾಗಿ ಸೋಮ ಮತ್ತು ಅಘನಾಶಿನಿ ನದಿಗೆ ಕಿರು ಅಣೆಕಟ್ಟೆ ನಿರ್ಮಾಣಕ್ಕೆ ಖಾಸಗಿ ಕಂಪೆನಿಯೊಂದು ಮುಂದಾಗಲಿದೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಆತಂಕ ಎದುರಾಗಿದೆ.
ನಿರಾಕರಣೆ: ಈ ಅಣೆಕಟ್ಟೆಗಳಾಗುವ ಸಾಧ್ಯತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟವಾಗಿಯೇ ನಿರಾಕರಿಸಿದ್ದು, ಜನರಿಗೆ ಮತ್ತು ಪರಿಸರಕ್ಕೆ ಮಾರಕವಾದ ಯಾವುದೇ ಯೋಜನೆಯನ್ನು ಸರ್ಕಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, `ಕಿರು ಅಣೆಕಟ್ಟೆಗಳ ನಿರ್ಮಾಣಕ್ಕೆ ಪರಿಸರ ಮತ್ತು ಅರಣ್ಯ ಇಲಾಖೆ ಒಪ್ಪಿಗೆ ಸೇರಿದಂತೆ ವಿವಿಧ ಹಂತಗಳಿವೆ, ಇವುಗಳನ್ನು ದಾಟಿ, ವಿವಿಧ ಇಲಾಖೆಗಳ ಪರವಾನಗಿ ಪಡೆಯದೇ ಕಿರುಅಣೆಕಟ್ಟೆ ಆಗಲು ಸಾಧ್ಯವಿಲ್ಲ~ ಎಂದಿದ್ದಾರೆ.