ಕಾಶ್ಮೀರ ಕಣಿವೆಯಲ್ಲಿ ಜನಮತ ಸಂಗ್ರಹಿಸುವ ಧೋರಣೆಗೆ ಬೆಂಬಲಿಸಿದ ಹಿರಿಯ ವಕೀಲ ಪ್ರಶಾಂತ್ಭೂಷಣ್ ವಿರುದ್ಧ ಪ್ರತಿಕ್ರಿಯಿಸುತ್ತ ಅಣ್ಣಾ ಹಜಾರೆ `ಈಗೇನಾದರೂ ಪಾಕ್ ವಿರುದ್ಧ ಯುದ್ಧ ನಡೆದರೆ ನಾನು ಅದರಲ್ಲಿ ಭಾಗವಹಿಸಲು ಸಿದ್ಧ~ (ಪ್ರ.ವಾ. ಅ.6) ಎಂದು ಘೋಷಿಸಿಕೊಳ್ಳುವ ಮೂಲಕ ಹಿಂದುತ್ವವಾದಿಯಂತೆ ಮುಸಲ್ಮಾನರ ವಿರುದ್ಧ ತಮ್ಮ ಎದೆಯ ನಂಜನ್ನೆಲ್ಲಾ ಹೊರಹಾಕಿದ್ದಾರೆ.
ಗಾಂಧೀಜಿ ಈಗೇನಾದರೂ ಬದುಕಿದ್ದು ಪಾಕ್ ವಿರುದ್ಧ ಯುದ್ಧ ಸಂಭವಿಸಿದ್ದರೆ ಏನು ಮಾಡುತ್ತಿದ್ದರು? ಎಂದರೆ ನೇರವಾಗಿ ಯುದ್ಧಭೂಮಿಗೆ ತೆರಳಿ ಎರಡೂ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗಾಗಿ ಉಪವಾಸ ಸತ್ಯಾಗ್ರಹ ಹೂಡುತ್ತಿದ್ದರು. ಗಾಂಧೀಜಿ ಕೋಮು ಸೌಹಾರ್ದಕ್ಕಾಗಿ ತಮ್ಮನ್ನು ತಾವೇ ಗಂಧ ತೇದಂತೆ ತೇದುಕೊಂಡು, ಕೊನೆಗೆ ಆ ಕಾರಣವಾಗಿಯೇ ಬಲಿದಾನವಾದರು ಕೂಡ.
ಇಂಥ ಮಹಾತ್ಮನೊಂದಿಗೆ ರಾಜಕೀಯ ಪಕ್ಷವೊಂದನ್ನು ಟೀಕಿಸುವ, ಇನ್ನೊಂದನ್ನು ಜಾಣ ಕಿವುಡನಂತೆ ಬೆಂಬಲಿಸುವ, ಕಟ್ಟಾ ಹಿಂದುತ್ವವಾದಿಯಂತೆ ಯುವ ಜನಾಂಗವನ್ನು ಪಾಕ್ ವಿರುದ್ಧ ಪ್ರಚೋದಿಸುವ ಅಣ್ಣಾ ಹಜಾರೆಯನ್ನು ಹೋಲಿಸುವುದಾದರೂ ಹೇಗೆ?
ಗಾಂಧಿ ಟೋಪಿ ಧರಿಸಿದವರೆಲ್ಲಾ, ಉಪವಾಸ ಕುಳಿತವರೆಲ್ಲಾ ಗಾಂಧೀಜಿ ಆಗಲಾರರು. ಇಂಥವರನ್ನು ಗಾಂಧಿ ಎಂದು ಬಿಂಬಿಸುವುದೇ ಅಹಿಂಸಾವಾದಿ ಗಾಂಧೀ ಮೌಲ್ಯಗಳಿಗೆ ನಾವು ಮಾಡುವ ಅಪಚಾರವಲ್ಲವೆ?