ನವದೆಹಲಿ (ಪಿಟಿಐ): ಒಂದು ವಾರದ ನೆನೆಗುದಿಯ ಬಳಿಕ ಮಂಗಳವಾರ ಪ್ರಮುಖ ಬೆಳವಣಿಗೆಯಲ್ಲಿ ಸರ್ಕಾರವು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಬಲಿಷ್ಠ ಜನಲೋಕಪಾಲ ಮಸೂದೆಗಾಗಿ ಚಳವಳಿ ನಡೆಸುತ್ತಿರುವ ಅಣ್ಣಾ ಹಜಾರೆ ತಂಡದ ಜೊತೆ ಮಾತುಕತೆಗೆ ಸಂಧಾನಕಾರರಾಗಿ ನೇಮಿಸಿದೆ.
ಅಣ್ಣಾ ಹಜಾರೆ ಅವರ ನಿಕಟವರ್ತಿ ಅರವಿಂದ ಕೇಜ್ರಿವಾಲ್ ಅವರು ಸರ್ಕಾರದ ಕ್ರಮವನ್ನು ಇಲ್ಲಿ ಪ್ರಕಟಿಸಿದರು. ತಮ್ಮ ತಂಡದ ಪರವಾಗಿ ಪ್ರಣವ್ ಜೊತೆಗೆ ಚರ್ಚಿಸಲು ಯಾರು ಸಂಧಾನಕಾರರಾಗಿರಬೇಕು ಎಂಬುದನ್ನು ಅಣ್ಣಾ ಹಜಾರೆ ಅವರು ತೀರ್ಮಾನಿಸುವರು ಎಂದು ಕೇಜ್ರಿವಾಲ್ ಹೇಳಿದರು.
ಕಾಂಗ್ರೆಸ್ ಸಂಸದ ಸಂದೀಪ್ ದೀಕ್ಷಿತ್ ಅವರ ನಿವಾಸದಲ್ಲಿ ನಡೆದ ಪ್ರಪ್ರಥಮ ನೇರ ಸಂಪರ್ಕದ ವೇಳೆ ಬಿಕ್ಕಟ್ಟು ಇತ್ಯರ್ಥದೆಡೆಗೆ ಮೊದಲ ಹೆಜ್ಜೆ ಇಡಲು ಸಾಧ್ಯವಾಯಿತು. ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಕೇಜ್ರಿವಾಲ್ ಅವರು ಪರಸ್ಪರ ಮಾತನಾಡಿ ವಿಷಯದ ಬಗ್ಗೆ ಇರಿಸಬಹುದಾದ ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚಿಸಿದರು.
~ಈಗಷ್ಟೇ ಸಲ್ಮಾನ್ ಅವರು ನಮ್ಮನ್ನು ಮಾತುಕತೆಗಳಿಗೆ ಆಹ್ವಾನಿಸಿದ್ದಾರೆ.ಪ್ರಣವ್ ಮುಖರ್ಜಿ ಅವರನ್ನು ನಮ್ಮೊಂದಿಗೆ ಮಾತುಕತೆ ನಡೆಸಲು ಸರ್ಕಾರದ ಪರ ಸಂಧಾನಕಾರರಾಗಿ ನೇಮಿಸಲಾಗಿದೆ ಎಂದು ಸಲ್ಮಾನ್ ತಿಳಿಸಿದ್ದಾರೆ~ ಎಂದು ಕೇಜ್ರಿವಾಲ್ ನುಡಿದರು.
ಅಣ್ಣಾ ನಿದ್ರಿಸುತ್ತಿದ್ದಾರೆ. ಎದ್ದ ಬಳಿಕ ಮಾತುಕತೆಯಲ್ಲಿ ನಮ್ಮ ತಂಡವನ್ನು ಯಾರು ಪ್ರತಿನಿಧಿಸಬೇಕು ಎಂದು ನಿರ್ಧರಿಸಲಾಗುವುದು ಎಂದು ಅವರು ರಾಮಲೀಲಾ ಮೈದಾನದಲ್ಲಿ ಮೇಳೈಸಿದ ಅಣ್ಣಾ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
~ಮಾತುಕತೆಗೆ ಹೋಗಬೇಕೆ?~ ಎಂಬುದಾಗಿ ಕೇಜ್ರಿವಾಲ್ ಪ್ರಶ್ನಿಸಿದಾಗ ಜನಸಮೂಹ ಹರ್ಷೋದ್ಘಾರದೊಂದಿಗೆ ಒಪ್ಪಿಗೆ ನೀಡಿತು.
ಈ ಮಧ್ಯೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಚಿದಂಬರಂ ಅವರೂ ಅಣ್ಣಾ ಹಜಾರೆ ಅವರಿಗೆ ನಿರಶನ ಕೊನೆಗೊಳಿಸುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.