ನವದೆಹಲಿ (ಪಿಟಿಐ/ಐಎಎನ್ಎಸ್): ಭ್ರಷ್ಟಾಚಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಧುಮುಕಿರುವ ಅಣ್ಣಾ ತಂಡ ನವದೆಹಲಿಯ ಜಂತರ್ ಮಂತರ್ನಲ್ಲಿ ಬುಧವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿತು.
ಆದರೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಇಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡಿದ್ದು, ಭಾನುವಾರದವರೆಗೆ ತಮ್ಮ ಬೇಡಿಕೆಗಳು ಈಡೇರದೇ ಹೋದರೆ ತಾವೂ ಕೂಡ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಭಾನುವಾರದಿಂದ ಆರಂಭಿಸುವುದಾಗಿ ಬೆದರಿಕೆ ಹಾಕಿದರು.
ಅಣ್ಣಾ ತಂಡದ ಪ್ರಮುಖರಾದ ಅರವಿಂದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಹಾಗೂ ಗೋಪಾಲ್ ರಾಯ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
ಇದಕ್ಕೂ ಮುನ್ನ ರಾಜಘಾಟ್ಗೆ ತೆರಳಿದ ಅಣ್ಣಾತಂಡ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ನಮಿಸಿತು.
ಜಂತರ್ ಮಂತರ್ನಲ್ಲಿ ಹಾಕಲಾಗಿರುವ ವೇದಿಕೆಯನ್ನೇರುತ್ತಿದ್ದಂತೆ ಅಣ್ಣಾ ಹಜಾರೆ ಅವರು `ಇಂಕ್ವಿಲಾಬ್ ಜಿಂದಾಬಾದ್~ ಹಾಗೂ `ಭಾರತ ಮಾತಾ ಕಿ ಜೈ~ ಎಂದು ಘೋಷಣೆಗಳನ್ನು ಕೂಗಿದರು.
ಪ್ರಬಲ ಲೋಕಪಾಲ ಕಾಯ್ದೆ ಜಾರಿ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವರ ವಿರುದ್ಧ ತನಿಖೆಗೆ ವಿಶೇಷ ತಂಡ, ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆ ಅಣ್ಣಾ ತಂಡದ ಪ್ರಮುಖ ಬೇಡಿಕೆಗಳಾಗಿವೆ.
ಅಣ್ಣಾ ತಂಡಕ್ಕೆ ಆಗಸ್ಟ್ 8 ರವರೆಗೂ ಉಪವಾಸ ಸತ್ಯಾಗ್ರಹ ನೀಡಲು ಜಂತರ್ಮಂತರ್ನಲ್ಲಿ ಅವಕಾಶ ನೀಡಲಾಗಿದೆ. ಆಗಸ್ಟ್ 8 ರಂದೇ ಲೋಕಸಭೆಯ ಮುಂಗಾರು ಅಧಿವೇಶನ ಪ್ರಾರಂಭಗೊಳ್ಳಲಿದೆ.