ನವದೆಹಲಿ (ಪಿಟಿಐ): ~ಚಳವಳಿಯು ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಗೊಂದಲಮಯವಾಗಿದೆ~ ಎಂದು ಆಕ್ಷೇಪಿಸಿ ಅಣ್ಣಾ ಹಜಾರೆ ತಂಡದ ಇಬ್ಬರು ಪ್ರಮುಖ ನಾಯಕರಾದ ಪಿ.ವಿ. ರಾಜಗೋಪಾಲ್ ಮತ್ತು ~ಜಲ ಮಾನವ~ ರಾಜೇಂದ್ರ ಸಿಂಗ್ ಅವರು ಮಂಗಳವಾರ ತಂಡದ ಕೋರ್ ಸಮಿತಿಯನ್ನು ಮಂಗಳವಾರ ತ್ಯಜಿಸಿದ್ದಾರೆ.
ಸಮಿತಿ ತ್ಯಜಿಸದಂತೆ ಅಣ್ಣಾ ತಂಡವು ತಮ್ಮ ಮೇಲೆ ಪ್ರಭಾವ ಬೀರುತ್ತಿದೆ ಎಂದು ರಾಜಗೋಪಾಲ್ ಅವರು ಹೇಳಿದ್ದರೂ, ಹಿಸ್ಸಾರ್ ನಲ್ಲಿ ಕಾಂಗ್ರೆಸ್ ವಿರೋಧಿ ಪ್ರಚಾರ ಅಭಿಯಾನ ಆರಂಭಿಸುವ ನಿರ್ಧಾರವನ್ನು ಕೋರ್ ಸಮಿತಿಯಲ್ಲಿ ಕೈಗೊಳ್ಳದಿದ್ದುದು ಈ ಇಬ್ಬರು ಪ್ರಮುಖರ ಸಮಿತಿ ತ್ಯಾಗಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗಿದೆ.
~ನಾನು ತಂಡದಿಂದ ಹೊರಹೋಗುತ್ತಿದ್ದೇನೆ. ತಂಡ ರಾಜಕೀಯಗೊಳ್ಳುತ್ತಿದೆ. ಹಿಸ್ಸಾರ್ ಸೇರಿದಂತೆ ಈ ವಿಚಾರದ ಬಗ್ಗೆ ಸುಳಿವು ನೀಡುವ ಹೇಳಿಕೆಗಳು ಬರುತ್ತಿವೆ ಎಂದು ರಾಜೇಂದ್ರ ಸಿಂಗ್ ಹೇಳಿದ್ದಾರೆ.
ಭೂಮಿಯ ಹಕ್ಕುಗಳಿಗಾಗಿ ಪ್ರಸ್ತುತ ತಮ್ಮ ಅಖಿಲ ಭಾರತ ಯಾತ್ರೆ ಸಲುವಾಗಿ ಕೇರಳದ ಅಟ್ಟಪ್ಪಾಡಿಗೆ ಬಂದಿರುವ ರಾಜಗೋಪಾಲ್ ಅವರು ತಮ್ಮ ನಿರ್ಧಾರದ ಬಗ್ಗೆ ಕೋರ್ ಸಮಿತಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ.
ನಾನು ಸದಸ್ಯತ್ವವನ್ನೇ ಕೋರಿಲ್ಲವಾದ್ದರಿಂದ ಪತ್ರ ಬರೆಯುವ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನು ರಾಜೇಂದ್ರ ಸಿಂಗ್ ವ್ಯಕ್ತ ಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕು ಎಂಬುದಾಗಿ ಹೇಳುವ ಮೂಲಕ ವಿವಾದ ಸೃಷ್ಟಿಸಿದ ಪ್ರಶಾಂತ ಭೂಷಣ್ ಅವರನ್ನು ತಂಡದಲ್ಲಿ ಮುಂದುವರಿಸಬೇಕೆ ಎಂಬ ಬಗ್ಗೆ ಕೋರ್ ಸಮಿತಿ ನಿರ್ಧರಿಸುತ್ತದೆ ಎಂಬುದಾಗಿ ಅಣ್ಣಾ ಹಜಾರೆ ಹೇಳುವುದರೊಂದಿಗೆ ಹೊಸ ಸಮಸ್ಯೆ ಶುರುವಾಗಿತ್ತು.
~ತಂಡದಲ್ಲಿ ಮುಂದುವರಿಯಲು ನನಗೆ ಇರುವ ತೊಂದರೆಗಳ ಬಗ್ಗೆ ತಿಳಿಸಿ ನಾನು ಪತ್ರ ಬರೆದಿದ್ದೇನೆ. ಅವರು (ತಂಡ) ಇಂತಹ ಯಾವುದೇ ನಿರ್ಧಾರ ಕೈಗೊಳ್ಳದಂತೆ ನನಗೆ ಹೇಳಿದ್ದಾರೆ. ನಾನು ಅಖಿಲ ಭಾರತ ಯಾತ್ರೆಯಲ್ಲಿ ಮಗ್ನನಾಗಿದ್ದೇನೆ~ ಎಂದು ರಾಜಗೋಪಾಲ್ ಅಟ್ಟಪ್ಪಾಡಿಯಿಂದ ಪಿಟಿಐಗೆ ತಿಳಿಸಿದರು.