ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಪರ ವಿವಿಧೆಡೆ ಪ್ರತಿಭಟನೆ

Last Updated 23 ಆಗಸ್ಟ್ 2011, 9:10 IST
ಅಕ್ಷರ ಗಾತ್ರ

ಬಳ್ಳಾರಿ: ಪ್ರಬಲ ಲೋಕಪಾಲ ಮಸೂದೆ ಜಾರಿಗೊಳಿಸುವಂತೆ ಆಗ್ರಹಿಸಿ, ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಮತ್ತು ದೇಶಭಕ್ತ ನಾಗರಿಕರ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ಶಿಫಾರಸುಗಳನ್ನು ಕೇಂದ್ರ ಸರಕಾರ ಒಪ್ಪಿಕೊಂಡು ಪ್ರಬಲ ಜನಲೋಕಪಾಲ ಮಸೂದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಮುಖಂಡರಾದ ಗುರುರಾಜರಾವ್, ಜಯಪ್ರಕಾಶ್, ಲೋಕೇಶ್, ಅನಿಲ್ ನಾಯ್ಡು, ಸುಬ್ಬರಾವ್ ಉಪಸ್ಥಿತರಿದ್ದರು.

ಹಗರಿಬೊಮ್ಮನಹಳ್ಳಿ ವರದಿ
ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ ಬೆಂಬಲಿಸಿ ಸೋಮವಾರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರಬಲ ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು.

 ಪ್ರತಿಭಟನೆಯ ಅಂಗವಾಗಿ ಪಟ್ಟಣದ ಈಶ್ವರ ದೇವಸ್ಥಾನದ ಆವರಣದಿಂದ 120ಕ್ಕೂ ಹೆಚ್ಚು ಆಟೋಗಳೊಂದಿಗೆ ಚಾಲಕರು ಬಸವೇಶ್ವರ ಬಜಾರ್ ಮೂಲಕ ಪ್ರತಿಭಟನಾ ರ‌್ಯಾಲಿಯಲ್ಲಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದರು. ಮನವಿ ಸಲ್ಲಿಸುವ ಮುನ್ನ ಪಕ್ಕದ ಹಗರಿ ಆಂಜನೇಯ ಬಯಲು ರಂಗಮಂದಿರದಲ್ಲಿ ಬಹಿರಂಗ ಸಮಾವೇಶ ನಡೆಸಿದರು.
 
ಸಿಐಟಿಯು ಮುಖಂಡ ಎಸ್.ಜಗನ್ನಾಥ್,  ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಎಂ.ವೀರಸಂಗಯ್ಯ ಮಾತನಾಡಿ, ಜನಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ದಮನಗೊಳಿಸುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ನೀತಿ ಖಂಡನಾರ್ಹ ಎಂದರು.

ಸಮಿತಿಯ ಜಿ.ಲಕ್ಷ್ಮೀಪತಿ, ಮಹಾಂತೇಶ್ ಪಾಟೀಲ್, ಆಟೋ ಸಂಘದ ರಾಜ್ಯ ಮುಖಂಡ ಸಂತೋಷ್ ಮಾತನಾಡಿದರು. ನಂತರ ಪ್ರಬಲ ಜನ ಲೋಕಪಾಲ ಮಸೂದೆ ಜಾರಿಗೊಳಿಸುವಂತೆ ಆಗ್ರಹಿಸಿ ಮನವಿ ಪತ್ರವನ್ನು ತಹಸೀಲ್ದಾರ್ ನಾಗರಾಜಭಟ್ ಮೂಲಕ ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಯಿತು. 
 
ಸಿಐಟಿಯು ಮುಖಂಡ ಲಿಂಗಪ್ಪ, ಪ್ರಾಂತ ರೈತ ಸಂಘದ ಕೊಟಗಿ ಮಲ್ಲಿಕಾರ್ಜುನ, ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ರಂಗಪ್ಪ ದಾಸರ್ ಮತ್ತು ಎಸ್‌ಎಫ್‌ಐ ಅನಂತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 ಸಂಘದ ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಕೈಲಾಸಮೂರ್ತಿ ಮತ್ತು ಕಾರ್ಯದರ್ಶಿ ರಮೇಶ್, ಮುಖಂಡರಾದ ಶ್ರೀನಿವಾಸ್, ಕುಮಾರ್ ಎಂ ವೀರೇಶ್, ಸತೀಶ್, ವಿಠೋಬ, ಶ್ರೀನಿವಾಸ, ಈರಣ್ಣ, ಪ್ರಭು, ಕೊಟ್ರೇಶ್ ಹಾಗು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT