ನವದೆಹಲಿ, (ಪಿಟಿಐ): ಸ್ವಾತಂತ್ರ್ಯ ದಿನಾಚರಣೆ, ಗಾಂಧಿವಾದಿ ಅಣ್ಣಾ ಹಜಾರೆ ಮತ್ತು ರಾಮದೇವ್ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ ವೇಳೆ ಸರ್ಕಾರಿ ಸ್ವಾಮ್ಯದ ಇಲ್ಲಿನ ಖಾದಿ ಮಳಿಗೆಗಳಲ್ಲಿ ರಾಷ್ಟ್ರಧ್ವಜಗಳ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ.
ಇಲ್ಲಿನ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ದ ಅಧಿಕಾರಿಗಳ ಪ್ರಕಾರ, ಏಪ್ರಿಲ್- ಆಗಸ್ಟ್ ತಿಂಗಳಲ್ಲಿ ಆಯೋಗದ ಮಳಿಗೆಯಲ್ಲಿ ಖಾದಿ ತ್ರಿವರ್ಣ ಧ್ವಜಗಳ ಮಾರಾಟದಲ್ಲಿ ಶೇ 35ರಷ್ಟು ಹೆಚ್ಚಳವಾಗಿದೆ.
ಮಾರುಕಟ್ಟೆಯಲ್ಲಿ ಈ ವರ್ಷದ ಏಪ್ರಿಲ್ ಮತ್ತು ಆಗಸ್ಟ್ನಲ್ಲಿ ಅಂದಾಜು ರೂ 10.5 ಕೋಟಿ ಮೊತ್ತದ ರಾಷ್ಟ್ರಧ್ವಜಗಳು ಮಾರಾಟವಾಗಿವೆ. ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಇದು ಶೇ 35ರಷ್ಟು ಹೆಚ್ಚಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ನಿರ್ದೇಶಕ ಎಸ್.ಪಿ. ಸಿಂಗ್ ತಿಳಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ ಮತ್ತು ಆಗಸ್ಟ್ ತಿಂಗಳಲ್ಲಿ 7.79 ಕೋಟಿ ರೂಪಾಯಿಗಳ ಮೊತ್ತದ ರಾಷ್ಟ್ರಧ್ವಜಗಳು ಮಾರಾಟವಾಗಿದ್ದವು.
ಅಣ್ಣಾ ಮತ್ತು ರಾಮದೇವ ಬೆಂಬಲಿಗರು ರ್ಯಾಲಿಯಲ್ಲಿ ಪಾಲ್ಗೊಳ್ಳಲು ಗಣನೀಯ ಪ್ರಮಾಣದಲ್ಲಿ ರಾಷ್ಟ್ರಧ್ವಜಗಳನ್ನು ಖರೀದಿಸಿದ್ದರಿಂದ ಮಾರಾಟ ಹೆಚ್ಚಾಗಿದೆ.