ಕೋಲಾರ: ಜನ ಲೋಕಪಾಲ ಮಸೂದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ಸತ್ಯಾಗ್ರಹ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ನಗರದ ಗಾಂಧಿವನದಲ್ಲಿ ಶನಿವಾರ ಎನ್ಜಿಓಗಳ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಪತ್ರ ಚಳವಳಿಯನ್ನು ನಡೆಸಿದರು.
ಏ. 5ರಿಂದ ಅಣ್ಣಾ ಹಜಾರೆಯವರು ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಮಣಿದ ಕೇಂದ್ರ ಸರ್ಕಾರ ಕರಡು ಸಮಿತಿಯನ್ನು ರಚಿಸಲು ಒಪ್ಪಿಗೆ ನೀಡಿದೆ. ಸರ್ಕಾರ ತಡಮಾಡದೆ ಶೀಘ್ರ ಕರಡು ಸಮಿತಿಯನ್ನು ರಚಿಸುವಂತೆ ಚಳವಳಿಗೆ ಚಾಲನೆ ನೀಡಿದ ಸಮಾಜ ವಿಜ್ಞಾನಿ ರವೀಂದ್ರನಾಥ್ ಆಗ್ರಹಿಸಿದರು.
ಗಾಂಧಿವನದಲ್ಲಿರುವ ಗಾಂಧೀಜಿ ಪ್ರತಿಮೆಯ ಬೆರಳಚ್ಚನ್ನು ಪ್ರತಿ ಕಾರ್ಡಿನ ಮೇಲೂ ಮೂಡಿಸಿರುವ ಅಂಚೆಪತ್ರಗಳನ್ನು ಪ್ರಧಾನಮಂತ್ರಿಗೆ ತಲುಪಿಸಲಾಗುವುದು. ಸಮಿತಿ ರಚನೆಯಾಗುವವರೆಗೂ ಚಳವಳಿಯನ್ನು ನಡೆಸಲಾಗುವುದೆಂದು ತಿಳಿಸಿದರು.
ಚಳವಳಿಯ ಸಂಘಟನಾ ಕಾರ್ಯದರ್ಶಿ ಎಂ.ಶಂಕರಪ್ಪ, ಟಿಪ್ಪು ಸೆಕ್ಯುಲರ್ ಸೇನೆಯ ಆಸಿಫ್, ಭಾರತ ದಲಿತ ಸೇನೆಯ ನಾರಾಯಣಸ್ವಾಮಿ, ಸಾರ್ವಜನಿಕರು ಚಳವಳಿಯಲ್ಲಿ ಪಾಲ್ಗೊಂಡಿದ್ದರು.