ಮಂಡ್ಯ: ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿ, ಲೋಕಪಾಲ ಮಸೂದೆಯ ಮಂಡನೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಕೈಗೊಂಡಿರುವ ಪ್ರತಿಭಟನೆಗೆ ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತವಾಗಿದೆ.
ರೈತ ಸಂಘದ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ವಿ.ಅಶೋಕ್ ನೇತೃತ್ವದಲ್ಲಿ ರೈತರು ನಗರದ ಕಾವೇರಿ ವನದಲ್ಲಿ ಇರುವ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಭ್ರಷ್ಟ ವ್ಯವಸ್ಥೆಯ ವಿರುದ್ಧ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಹೋರಾಟ ಫಲ ನೀಡಿಲ್ಲ. ಈಗ ಜನಜಾಗೃತಿ ಕಹಳೆ ಮೊಳಗಿಸಿರುವ ಅಣ್ಣಾ ಹಜಾರೆ ಅವರ ಕಾಳಜಿ ಮುಖ್ಯವಾದುದು. ಅವರ ಹೋರಾಟಕ್ಕೆ ಬೆಂಬಲಿಸಿ ಧರಣಿ ನಡೆಸಲಾಗುತ್ತಿದೆ ಎಂದು ಮುಖಂಡರು ಹೇಳಿದರು.
ಸಾಮಾನ್ಯರ ಅಭಿಪ್ರಾಯದ ಆಧಾರದಲ್ಲಿ ಲೋಕಪಾಲ ಮಸೂದೆಯನ್ನು ಜಾರಿಗೆ ತರಬೇಕು. ಈ ಮಸೂದೆಯನ್ನು ಜಾರಿಗೆ ತರುವ ಮೂಲಕ ಭ್ರಷ್ಟಾಚಾರ ವ್ಯವಸ್ಥೆಯನ್ನು ನಿಯಂತ್ರಿಸಬಹುದು ಎಂದು ಪ್ರತಿಪಾದಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೋಣಸಾಲೆ ನರಸರಾಜು, ಮುಖಂಡರಾದ ಸುರೇಸ್, ಹನಿಯಂಬಾಡಿ ನಾಗರಾಜು, ಬಳ್ಳಾರಿಗೌಡ ಇತರರು ಪ್ರತಿಭಟನೆಯಲ್ಲಿ ಇದ್ದರು.