ಶಿಡ್ಲಘಟ್ಟ: ‘ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ವ್ಯಾಪಿಸಿದ್ದು, ಇದರ ವಿರುದ್ಧ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ನಮ್ಮ ಬೆಂಬಲವಿದೆ. ಇಂದಿನ ದಿನಮಾನಗಳಲ್ಲಿ ಹೋರಾಟದ ಅಗತ್ಯವಿದೆ ತಾಲ್ಲೂಕು ವಕೀಲರ ಸಂಘದ ಮುಖಂಡ ಡಿ.ಅಶ್ವತ್ಥನಾರಾಯಣ ತಿಳಿಸಿದರು.
ಅಣ್ಣಾ ಹಜಾರೆ ಅವರು ಕೈಗೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ತಾಲ್ಲೂಕು ವಕೀಲರ ಸಂಘದ ಸದಸ್ಯರು ನಂತರ ತಹಶೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಮನವಿಪತ್ರ ಸಲ್ಲಿಸಿದರು.
‘ಸುಮಾರು 42 ವರ್ಷಗಳಿಂದ ಲೋಕ್ಪಾಲ್ ಕಾಯಿದೆಗೆ ತಿದ್ದುಪಡಿ ತರಲಾಗಿಲ್ಲ. ಭ್ರಷ್ಟಾಚಾರ ತೀವ್ರ ಸ್ವರೂಪದಲ್ಲಿ ವ್ಯಾಪಿಸಿದ್ದರೂ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರವನ್ನು ಸಹಿಸದೆ ಹೋರಾಟ ಕೈಗೊಂಡಿರುವ ಅಣ್ಣಾ ಹಜಾರೆಯವರಿಗೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು’ ಎಂದು ಅವರು ಮನವಿ ಮಾಡಿದರು.
ವಕೀಲರಾದ ವೆಂಕಟೇಶ್, ಯೋಗಾನಂದ, ಎ.ನಾರಾಯಣಸ್ವಾಮಿ, ರವೀಂದ್ರನಾಥ್, ಕೆ.ವಿಶ್ವನಾಥ್, ಮುನಿರಾಜು, ಲಕ್ಷ್ಮಿ, ಜೆ.ವೆಂಕಟೇಶ್, ಎಂ.ಬಿ.ಲೋಕೇಶ್, ಅಶೋಕ್, ಜಿ.ಎಂ.ಶ್ರೀನಿವಾಸ್, ದ್ಯಾವಪ್ಪ, ನೌಷಾದ್ಅಲಿ, ಎಂ.ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.