ಕೃಷ್ಣರಾಜಪೇಟೆ: ಲೋಕಪಾಲ್ ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರು ನಡೆಸುತ್ತಿರುವ ಮುಷ್ಕರವನ್ನು ಬೆಂಬಲಿಸಿ ತಾಲ್ಲೂಕು ವಕೀಲರ ಸಂಘದ ಸದಸ್ಯರು ಶುಕ್ರವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದರು.
ಪಟ್ಟಣದ ಮಿನಿ ವಿಧಾನಸೌಧದವರೆಗೆ ಸಾಗಿಬಂದ ವಕೀಲರು ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದರು.
ದೇಶದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವ ಭ್ರಷ್ಟಾಚಾರವನ್ನು ಬೇರುಸಹಿತ ತೊಲಗಿಸಬೇಕು. ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಜನಪ್ರತಿನಿಧಿಗಳು, ಅಧಿಕಾರಿಗಳು, ಗುತ್ತಿಗೆದಾರರು, ನೌಕರರನ್ನು ಮುಲಾಜಿಲ್ಲದೆ ಶಿಕ್ಷೆಗೆ ಗುರಿಪಡಿಸಬೇಕು. ದೇಶದ ಅಮೂಲ್ಯ ಆಸ್ತಿಯನ್ನೆಲ್ಲಾ ಲೂಟಿ ಮಾಡುತ್ತಿರುವ ಕೆಲವೇ ಸದೃಢ ವ್ಯಕ್ತಿಗಳು, ಬೇನಾಮಿ ಹೆಸರುಗಳಲ್ಲಿ ಇಂತಹ ಆಸ್ತಿಗಳನ್ನು ಸಂಗ್ರಹಿಸುತ್ತಿದ್ದು, ಇದರ ವಿರುದ್ಧ ದೇಶದಾದ್ಯಂತ ಉಗ್ರ ಹೋರಾಟ ನಡೆಯುವಂತಾಗಬೇಕು. ದೇಶವನ್ನು ಇಂತಹ ಷಡ್ಯಂತ್ರದಿಂದ ರಕ್ಷಿಸಲು ಸಾಧ್ಯವಾಗುವ ಲೋಕಪಾಲ್ ಮಸೂದೆಯನ್ನು ಮೀನಮೇಷ ಎಣಿಸದೆ ಜಾರಿಗೆ ತರಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.
ವಕೀಲರ ಸಂಘದ ಅಧ್ಯಕ್ಷ ಎಚ್.ರವಿ, ವಕೀಲರಾದ ಎಸ್.ಸಿ.ವಿಜಯಕುಮಾರ್, ಅನಂತರಾಮಯ್ಯ, ರವಿಶಂಕರ್, ಚಂದ್ರಶೇಖರಯ್ಯ, ಮತ್ತಿತರರು ಉಪಸ್ಥಿತದ್ದರು.