ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಹೋರಾಟಕ್ಕೆ ಗ್ರಾಮಗಳಿಂದಲೂ ಬೆಂಬಲ

Last Updated 26 ಆಗಸ್ಟ್ 2011, 6:25 IST
ಅಕ್ಷರ ಗಾತ್ರ

ಗೋಕಾಕ: ಪ್ರಬಲ ಜನ ಲೋಕಪಾಲ ಮಸೂದೆ ಜಾರಿ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ತಾಲ್ಲೂಕಿನ ಮದವಾಲ ಗ್ರಾಮಸ್ಥರು ಧರಣಿ ನಡೆಸಿದರು.

ಈ ಕುರಿತು ಮನವಿಯೊಂದನ್ನು ಗ್ರಾ.ಪಂ. ಕಾರ್ಯದರ್ಶಿ ಮುಖಾಂತರ ತಹಸೀಲ್ದಾರರಿಗೆ ರವಾನಿಸಿದರು.
ಧರಣಿ ನೇತೃತ್ವವನ್ನು ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ನಿರ್ವಾಣಿ ವಹಿಸಿದ್ದರು.
ಗ್ರಾಮದ ಪ್ರಮುಖರು ಹಾಗೂ ಭ್ರಷ್ಟಾಚಾರ ವಿರೋಧಿ ಅಂದೋಲನ ಬೆಂಬಲಿಸುವ ಸಾರ್ವಜನಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪಾಶ್ಚಾಪುರ ಬಂದ್ ಯಶಸ್ವಿ
ಯಮಕನಮರಡಿ
: ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಬುಧವಾರ ಸಮೀಪದ ಪಾಶ್ಚಾಪುರದಲ್ಲಿ ನೀಡಿದ್ದ ಬಂದ್ ಕರೆ ಯಶಸ್ವಿಯಾಯಿತು. ಗ್ರಾಮದ ಭಾರತೀಯ ಸತ್ಸಂಗ ಸಮಾಜ ಹಾಗೂ ಕರವೇ ಕಾರ್ಯಕರ್ತರು ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ಆಲೂರವ್ವನ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಹೊರಟು ಬಸ್ ನಿಲ್ದಾಣದವರಿಗೆ ಬಂದು ಅಶೋಕ ಸ್ತಂಭದ ಬಳಿ ಸಭೆ ನಡೆಸಿ ಗ್ರಾಮ ಲೆಕ್ಕಾಧಿಕಾರಿ ಎಸ್.ಎ. ತುಪ್ಪದ ಅವರಿಗೆ ಮನವಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಕುಂದರಗಿ ಅಡವಿ ಸಿದ್ಧೇಶ್ವರ ಮಠದ ಅಮೇಶ್ವರ ದೇವರು, ಹಿರೇಮಠದ ವಿಶ್ವಾರಾಧ್ಯ ದೇವರು ಭಾರತೀಯ ಸತ್ಸಂಗ ಸಮಾಜದ ಅಧ್ಯಕ್ಷ ಸ್ವಾಮಿ ಭಕ್ತಿ ತೀರ್ಥ ಮಾತನಾಡಿದರು.
ಶಂಬುಲಿಂಗ ದೇವರು ಉಪಸ್ಥಿತರಿದ್ದರು. ಗ್ರಾಮದ ಅಂಗಡಿಗಳು ಶಾಲಾ ಕಾಲೇಜುಗಳು ಮುಚ್ಚಿದವು. 

ಏಳನೇ ದಿನದಲ್ಲಿ ಸತ್ಯಾಗ್ರಹ
ರಾಮದುರ್ಗ: ಪ್ರಬಲ ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಸತ್ಯಾಗ್ರಹ ಬೆಂಬಲಿಸಿ ರಾಮದುರ್ಗದ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಸರದಿ ಉಪವಾಸ ಸತ್ಯಾಗ್ರಹದ 7ನೇ ದಿನವಾದ ಗುರುವಾರ ತಾಲ್ಲೂಕು ಛಾಯಾಗ್ರಾಹಕ ಸಂಘದ ಸದಸ್ಯರು ಮತ್ತು ಮೆಟಲ್ ಅಸೋಸಿಯೇಷನ್ ಸದಸ್ಯರು ಭಾಗವಹಿಸಿದ್ದರು.

ಸತ್ಯಾಗ್ರಹದಲ್ಲಿ ರಾಮದುರ್ಗ ತಾಲ್ಲೂಕು ಸರಾಫ್ ವರ್ತಕರು, ಹಾರ್ಡ್‌ವೇರ್ ವರ್ತಕರು, ಬಾಂಡೆ ವರ್ತಕರ ಸಂಘದ ಪದಾಧಿಕಾರಿಗಳಾದ ಎನ್.ಡಿ. ದಂಡಾವತಿ, ಶಂಕರಲಾಲ ಡುಮಾವತ, ಡಿ.ಜೆ. ಮಹಾಲಿಂಗಪೂರಕರ, ಶ್ರೀಧರ ಪತ್ತೇಪೂರ, ನಾಗರಾಜ ಪತ್ತೇಪೂರ, ಸುರೇಶ ಬೆಂಬಳಗಿ, ಸಂಜೀವ ವನಕುದರಿ, ಸುರೇಶ ಪತ್ತೇಪೂರ,

ಶಶಿಧರ ಪತ್ತೇಪೂರ, ಪ್ರಶಾಂತ ಫತ್ತೇಪೂರ, ಗಜಾನನ ಮಲಜಿ, ಗಂಗಾ`ರ ನಿಜಗುಲಿ, ಜವಾಹರಲಾಲ ಮಲಜಿ, ರಫೀಕ್‌ಅಹ್ಮದ ಕಲೈಗಾರ, ಮಹೇಶ ಹುಕ್ಕೇರಿ, ಮಾಬೂಬಖಾನ ಪಠಾಣ, ಸಂಪತ್ತಕುಮಾರ ಭೂತಡಾ, ರಾಜು ಮಲಜಿ, ಉದಯ ಚೊಳಚಗುಡ್ಡ ಮತ್ತು ಹಲವಾರು ಸ್ಟುಡಿಯೊಗಳ ಮಾಲೀಕರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ನಾಗರಿಕ ಜಾಗೃತ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ವೈ.ಬಿ. ಕುಲಗೋಡ ನೇತೃತ್ವ ವಹಿಸಿದ್ದರು.
ಬೈಕ್ ರ‌್ಯಾಲಿಅಣ್ಣಾ ಸತ್ಯಾಗ್ರಹ ಬೆಂಬಲಿಸಿ ರಾಮದುರ್ಗದ ವಿವಿಧ ಸಂಘಟನೆಗಳ ಮುಖಂಡರು ಬೈಕ್ ರ‌್ಯಾಲಿ ನಡೆಸಿದರು.

ಮಹಾತ್ಮ ಗಾಂಧಿ ಪುತ್ಥಳಿಯಿಂದ ಹೊರಟ ಬೈಕ್ ರ‌್ಯಾಲಿಯು ನೇಕಾರ ಪೇಟ, ಮಿನಿ ವಿಧಾನಸೌಧ, ಹಳೇ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಬೆಳಗಾವಿ ರೋಡ, ಹಳೇ ಪೊಲೀಸ್ ಠಾಣೆ ರಸ್ತೆ, ಕೃಷ್ಣಾ ಚಿತ್ರಮಂದಿರ ರಸ್ತೆ, ಸ್ಟೇಟ್ ಬ್ಯಾಂಕ್ ಮೈಸೂರ ರಸ್ತೆ, ತೇರ ಬಜಾರ ಹಾಗೂ ಇತರ ಪ್ರಮುಖದ ಬೀದಿಗಳಲ್ಲಿ ಸಂಚರಿಸಿತು.ಬೈಕ್ ರ‌್ಯಾಲಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಹುದಲಿಯಲ್ಲಿ ಮೆರವಣಿಗೆ
ಬೆಳಗಾವಿ: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ತಾಲ್ಲೂಕಿನ ಹುದಲಿ ಗ್ರಾಮದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಯಿತು. ಗ್ರಾಮದ ಸ್ವಾತಂತ್ರ್ಯಯೋಧರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಖಾದಿ ಸಂಘದ ಕಾರ್ಯಕರ್ತರು, ರೈತರು ಹಾಗೂ ಶಾಲಾ ಮಕ್ಕಳು ಸೇರಿಕೊಂಡು ಗ್ರಾಮದ ಓಣಿ- ಓಣಿಗಳಲ್ಲಿ ಮೆರವಣಿಗೆ ನಡೆಸಿ ಜನ ಲೋಕಪಾಲ ಮಸೂದೆ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಮೆರವಣಿಗೆಯ ಮುನ್ನ ಗಾಂಧಿ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಕರ್ನಾಟಕ ಸಿಂಹ ಗಂಗಾಧರರಾವ್ ದೇಶಪಾಂಡೆ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆ ಬಳಿಕ ಗಾಂಧಿ ಆಶ್ರಮಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು.

ಕುಂದರಗಿ ಮಠದ ಅಮರೇಶ್ವರ ಸ್ವಾಮೀಜಿ ಮಾತನಾಡಿ, “ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಮಹನಿಯರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಭ್ರಷ್ಟಾಚಾರ ನಿರ್ಮೂಲನೆ ಆಗಬೇಕಾಗಿದೆ. ಅಣ್ಣಾ ಹಜಾರೆ ನೇತೃತ್ವದಲ್ಲಿ ಶಿಫಾರಸು ಮಾಡಿರುವ ಜನ ಲೋಕಪಾಲ ಮಸೂದೆ ಜಾರಿಯಿಂದ ಮಾತ್ರ ಇದು ಸಾಧ್ಯ” ಎಂದು ಅಭಿಪ್ರಾಪಟ್ಟರು.

ಜಿಲ್ಲಾ ಸ್ವಾತಂತ್ರ್ಯಯೋಧರ ಸಂಘದ ಅಧ್ಯಕ್ಷ ಸೋಮಲಿಂಗ ಮಳಗಲಿ ಅಣ್ಣಾ ಹಜಾರೆ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕರೆ ನೀಡಿದರು. ಸಿ.ಬಿ. ಮೋದನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರೇಬಾಗೇವಾಡಿಯಲ್ಲಿ ಪ್ರತಿಭಟನೆ

ಬೆಳಗಾವಿ: ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕರವೇ ಕಾರ್ಯಕರ್ತರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಬೆಳಿಗ್ಗೆ ಪಂಚಾಯಿತಿಯಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತಕ್ಕೆ ಆಗಮಿಸಿದರು. ನಂತರ ಕೆಲ ಕಾಲ ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಅಣ್ಣಾ ಹಜಾರೆ ಪರ ಘೋಷಣೆಗಳನ್ನು ಕೂಗಿ ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿದರು.

ಲಿಂಗಾಯತ ಧರ್ಮ ಸಭೆ ಬೆಂಬಲ
ಬೆಳಗಾವಿ: ಭ್ರಷ್ಟಾಚಾರ ನಿರ್ಮೂಲನೆಗೆ ಜನ ಲೋಕಪಾಲ ಮಸೂದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಲಿಂಗಾಯತ ಧರ್ಮ ಮಹಾಸಭಾದ ಆಶ್ರಯದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

`ಕಾಯಕ ತತ್ವ~ದ ವಿರೋಧಿಯಾದ, ಸಮಾಜದ ಹಿತಕ್ಕೆ ಧಕ್ಕೆ ತರುವ `ಭ್ರಷ್ಟಾಚಾರ~ವನ್ನು ಬೇರು ಸಹಿತ ಕಿತ್ತು ಹಾಕಬೇಕಾದರೆ ಜನ ಲೋಕಪಾಲ ಮಸೂದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಲಿಂಗಾಯತ ಧರ್ಮ ಪೀಠದ ಬಸವ ಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಗಣಾಚಾರದಳಗಳ ಸದಸ್ಯರು ಧರಣಿ ನಡೆಸಿ ಅಣ್ಣಾ ಹಜಾರೆ ಹೋರಾಟವನ್ನು ಬೆಂಬಲಿಸಿದರು.

ಈ ಸಂದರ್ಭದಲ್ಲಿ ಲಿಂಗಾಯತ ಧರ್ಮ ಮಹಾಸಭಾದ ಕೇಂದ್ರ ಸಮಿತಿ ಅಧ್ಯಕ್ಷ ಕೆ. ಬಸವರಾಜ, ಬೆಳಗಾವಿ ಜಿಲ್ಲಾ ಘಟಕದ ಡಾ. ಎಸ್.ಬಿ. ಪಾಟೀಲ, ರಾಷ್ಟ್ರೀಯ ಬಸವ ದಳದ ಆನಂದ ಗುಡಸ್, ನೀಲಗಂಗಾ ಪಾಟೀಲ, ಮಲ್ಲಿಕಾರ್ಜುನ ಆಡಿನ್, ಬಿರಾದಾರ ಪಾಟೀಲ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT