ಮೈಸೂರು: ಜನ ಲೋಕಪಾಲ ಮಸೂದೆಗೆ ಒತ್ತಾಯಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ನಗರದಲ್ಲಿ ಮಂಗಳವಾರವೂ ಬೆಂಬಲ ವ್ಯಕ್ತವಾಯಿತು. ಎಡಪಕ್ಷಗಳಾದ ಸಿಪಿಐ(ಎಂ) ಸಿಪಿಐ ಹಾಗೂ ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದ ವಿರುದ್ಧವಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದವು.
ಇವರಿಗೆ ಇಂಬುಕೊಟ್ಟಂತೆ ಡಿ.ಬನುಮಯ್ಯ, ಸದ್ವಿದ್ಯಾ ಹಾಗೂ ಮಹಾರಾಜ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಣ್ಣಾ ಹೋರಾಟವನ್ನು ಬೆಂಬಲಿಸಿದರು. ಸದ್ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳು ಬೈಕ್ ರ್ಯಾಲಿ ನಡೆಸಿ ಅಣ್ಣಾ ಹೋರಾಟಕ್ಕೆ ಸಾಥ್ ನೀಡಿದರು.
`ಭ್ರಷ್ಟಾಚಾರ ತೊಲಗಲಿ~, `ಸಾಕಪ್ಪಾ ಸಾಕು, ಭ್ರಷ್ಟಾ ಚಾರ ಸಾಕು~, ಜನ ಲೋಕಪಾಲ ಮಸೂದೆ ಅಂಗೀಕರಿಸಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ~, `ಅಣ್ಣಾ ಹೋರಾಟಕ್ಕೆ ಜಯವಾಗಲಿ~ ಇತ್ಯಾದಿ ಘೋಷಣೆ ಕೂಗಿದರು.
ಸಿಪಿಐ (ಎಂ): ಸಿಪಿಐ(ಎಂ) ಕಾರ್ಯದರ್ಶಿ ಶೇಷಾದ್ರಿ ಮಾತ ನಾಡಿ `ಅಣ್ಣಾ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ದೇಶದ ಜನತೆಯನ್ನು ಎಚ್ಚರಿಸಿದ್ದಾರೆ. ಜಯಪ್ರಕಾಶ್ ನಾರಾಯಣ್ (ಜೆಪಿ) ಬಿಟ್ಟರೆ ಈ ರೀತಿಯ ಹೋರಾಟ ಕೈಗೊಂಡಿರುವುದು ಅಣ್ಣಾ ಮಾತ್ರ.
ಅವರ ಹೋರಾಟಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆದರೆ ಕಾಂಗ್ರೆಸ್ ಅವರನ್ನು ಬಂಧಿಸುವ ಮೂಲಕ ಹಿಟ್ಲರ್ ನೀತಿ ಅನುಸರಿಸಿತು. ಸಂವಿಧಾನ ವಿರೋಧಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು~ ಎಂದು ಕರೆ ನೀಡಿದರು.
ಚುನಾವಣಾ ಭ್ರಷ್ಟಾಚಾರ ದಿನೇ ದಿನೇ ಹೆಚ್ಚುತ್ತಿದ್ದು, ಪ್ರಾಮಾಣಿಕರು, ಸಾಮಾನ್ಯರು ಚುನಾ ವಣೆಯಲ್ಲಿ ಸ್ಪರ್ಧಿ ಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಆಮೂಲಾಗ್ರ ಸುಧಾರಣೆ ಅಗತ್ಯವಾಗಿದೆ ಎಂದು ಹೇಳಿದರು.
ಸಿಪಿಐ (ಎಂ) ಸಂಚಾಲಕ ಲ.ಜಗನ್ನಾಥ, ಜಯರಾಂ, ರಾಜು, ಜಗದೀಶ್ ಇತರರು ಪ್ರತಿಭಟನೆಯಲ್ಲಿದ್ದರು.
ಜೆಡಿಎಸ್:ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಜಣ್ಣ ಮಾತನಾಡಿ `ತಳಮಟ್ಟದಿಂದ ಭ್ರಷ್ಟಾಚಾರ ತೊಲಗಬೇಕು. ಅಣ್ಣಾ ಹೋರಾಟಕ್ಕೆ ಜೆಡಿಎಸ್ ಬೆಂಬಲ ಸೂಚಿಸುತ್ತದೆ~ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಚಿಕ್ಕಮಾದು, ಮಾಜಿ ಶಾಸಕ ಬಾಲರಾಜ್, ಉಪಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆ ಸದಸ್ಯರಾದ ಕೆ.ವಿ.ಮಲ್ಲೇಶ್, ಕೆಂಪಣ್ಣ, ಶಿವಣ್ಣ, ಎಸ್ಬಿಎಂ ಮಂಜು, ಚಾಮರಾಜ ಘಟಕದ ಅಧ್ಯಕ್ಷ ಪಿ.ಮಂಜುನಾಥ್, ಪ್ರಕಾಶ್ ಕೆ.ಆರ್, ಆರ್.ಡಿ.ವಿಶ್ವನಾಥ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ದಿನೇಶ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೀದಿಗಿಳಿದ ವಿದ್ಯಾರ್ಥಿಗಳು: ಜನ ಲೋಕಪಾಲ ಮಸೂದೆ ಮಂಡನೆಗೆ ಒತ್ತಾಯಿಸಿ ಅಣ್ಣಾ ನಡೆಸುತ್ತಿರುವ ಹೋರಾ ಟಕ್ಕೆ ನಗರದ ಡಿ.ಬನುಮಯ್ಯ ಕಾಲೇಜಿನ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದರು. ಕಾಲೇಜಿನಿಂದ ಹೊರಟ ಬನುಮಯ್ಯ ಕಾಲೇಜು ವೃತ್ತದಿಂದ ಸದ್ವಿದ್ಯಾ ಶಾಲೆ ಮಾರ್ಗವಾಗಿ ಜೆಎಲ್ಬಿ ರಸ್ತೆ, ಡಿ.ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.
`ಟ್ವಿಂಕಲ್ ಟ್ವಿಂಕಲ್ ಲಿಟ್ಲ್ಸ್ಟಾರ್, ಅಣ್ಣಾ ಹಜಾರೆ ಸೂಪರ್ ಸ್ಟಾರ್~ ಎಂದು ಘೋಷಣೆ ಕೂಗಿದರು. ಸದ್ವಿದ್ಯಾ ಕಾಲೇಜು ಹಾಗೂ ಮಹಾರಾಜ ಪಿಯು ಕಾಲೇಜು ವಿದ್ಯಾರ್ಥಿಗಳು ಇವರಿಗೆ ಸಾಥ್ ನೀಡಿದರು.
ವಿದ್ಯಾರ್ಥಿಗಳಾದ ಚೇತನ್, ಗಣೇಶ್, ಕೃಷ್ಣ, ಪ್ರಸಾದ್, ಲೋಕೇಶ್ ಇತರರು ಪ್ರತಿಭಟನೆಯಲ್ಲಿದ್ದರು.
ಬನುಮಯ್ಯ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಮೈಸೂರಿನ ಗಾಂಧಿವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಉದಯಗಿರಿಯಿಂದ ಹೊರಟ ವಿದ್ಯಾರ್ಥಿಗಳು ಗಾಂಧಿ ಚೌಕದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.
ಬೈಕ್ ರ್ಯಾಲಿ: ಸದ್ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳು ಬೈಕ್ ರ್ಯಾಲಿ ಮೂಲಕ ಅಣ್ಣಾ ಹೋರಾಟಕ್ಕೆ ಬೆಂಬಲ ಸೂಚಿಸಿ ದರು. ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದರು.
ಅಕ್ಕಿಚೌಕ ವ್ಯಾಪಾರಿಗಳು: ಬೆಂಕಿನವಾಬ್ ರಸ್ತೆಯ ಅಕ್ಕಿಚೌಕ ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳು ಅಣ್ಣಾ ಹೋರಾಟ ಬೆಂಬಲಿಸಿದರು. ತರಕಾರಿ ವರ್ತಕರು ಗಾಂಧಿಚೌಕ ದಲ್ಲಿ ಪ್ರತಿಭಟನೆ ನಡೆಸಿದರು. ವ್ಯಾಪಾರಿಗಳಾದ ಸುರೇಶ್, ರವಿಕುಮಾರ್, ಮಧುಸೂದನ್, ಚಂದ್ರು ಇತರರು ಇದ್ದರು.
ಹೆಬ್ಬಾಳು ಕೈಗಾರಿಕೋದ್ಯಮಿಗಳು: ಅಣ್ಣಾ ಹೋರಾಟಕ್ಕೆ ಹೆಬ್ಬಾಳ್ ಇಂಡಸ್ಟ್ರೀಯಲ್ ಎಸ್ಟೇಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಬೆಂಬಲ ಸೂಚಿಸಿತು. ಅಸೋಸಿಯೇಷನ್ ಅಧ್ಯಕ್ಷ ಎನ್.ಎಚ್.ಜಯಂತ, ಮುಖಂಡರಾದ ಎಚ್.ಎನ್. ನಾಗರಾಜ್, ಎಚ್.ಡಿ.ರಾಘವೇಂದ್ರ, ಹರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.