ಅಣ್ಣಿಗೇರಿ: ಇಲ್ಲಿಯ ದಾಸೋಹ ಮಠದ ರುದ್ರಮುನಿ ಸ್ವಾಮೀಜಿಯ 50ನೇ ವರ್ಷದ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಕುಮಾರ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವ ಭಕ್ತರ ಸಡಗರದ ಮಧ್ಯೆ ಮಂಗಳವಾರ ನೆರವೇರಿತು.
ಶ್ರೀಮಠದಿಂದ ಹೊರಟ ಅಡ್ಡಪಲ್ಲಕ್ಕಿ ಮೆರವಣಿಗೆ ಜಾಡಗೇರಿ ತಲುಪಿ ಜೈನ್ ಬಸದಿ ಮಾರ್ಗವಾಗಿ ಮಠಕ್ಕೆ ಮರಳಿತು. ಪುರವಂತರ ವೀರಭದ್ರನ ಅವತಾರ, ಕರಡಿ ಮಜಲು, ಭಜನೆ, ಝಾಂಜ್ ಮೇಳ, ಕೋಲಾಟ ಉತ್ಸವಕ್ಕೆ ಮೆರುಗು ತಂದವು.
ರಾತ್ರಿ ಜರುಗಿದ ದಾಸ ಚಿಂತನಗೋಷ್ಠಿಯಲ್ಲಿ ನರಗುಂದ ಪತ್ರಿವನ ಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಭಕ್ತಿಯ ರಸದೌತಣ ನೀಡಿದರು.
ಕಾಂಗ್ರೆಸ್ ಮುಖಂಡರಾದ ಎಚ್.ವಿ. ಮಾಡಳ್ಳಿ, ಆರ್.ಎಚ್. ಕೋನರಡ್ಡಿ, ಶಿವಾನಂದ ಭೂಮಣ್ಣವರ, ಜಾತ್ರಾ ಸಮಿತಿ ಗೌರವಾಧ್ಯಕ್ಷ ಶಾಸಕ ಎನ್.ಎಚ್. ಕೋನರಡ್ಡಿ, ಅಧ್ಯಕ್ಷ ಷಣ್ಮುಖಪ್ಪ ಗುರಿಕಾರ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಮಹೇಶಗೌಡ ದೇಸಾಯಿ ಇತರರು ಹಾಜರಿದ್ದರು.
ಕೆರೆಗೆ ಬಾಗಿನ
ಅಣ್ಣಿಗೇರಿ: ಮಲಪ್ರಭಾ ನೀರಿನಿಂದ ತುಂಬಿ ತುಳುಕುತ್ತಿರುವ ಇಲ್ಲಿಯ ಕುಡಿಯುವ ನೀರಿನ ಸಂಗ್ರಹದ ಅಂಬಿಗೇರಿ ಕೆರೆಗೆ ಶಾಸಕ ಎನ್.ಎಚ್. ಕೋನರಡ್ಡಿ ಬಾಗಿನ ಅರ್ಪಿಸಿ ಗಂಗಾ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಎಲ್ಲಿ ನೀರಿದೆಯೋ ಅಲ್ಲಿ ನೆಮ್ಮದಿ ಇದೆ. ಹೀಗಾಗಿ ಕ್ಷೇತ್ರದ ಜನತೆಗೆ ನೀರು ಒದಗಿಸುವುದು ತಮ್ಮ ಪ್ರಥಮ ಆದ್ಯತೆಯಾಗಿದೆ. ಅಣ್ಣಿಗೇರಿ ಪಟ್ಟಣಕ್ಕೆ ಒಳಚರಂಡಿ ಯೋಜನೆ ಅಳವಡಿಸುವುದಕ್ಕೆ ತಾವು ಶಕ್ತಿ ಮೀರಿ ಶ್ರಮಿಸುವೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಬಿ.ಎಫ್.ಜಿಡ್ಡಿ, ಪುರಸಭೆ ಸದಸ್ಯರು, ಮುಖಂಡರಾದ ಷಣ್ಮುಖಪ್ಪ ಗುರಿಕಾರ, ದ್ಯಾಮಪ್ಪ ಕೊಗ್ಗಿ, ಶಿವಶಂಕರ ಕಲ್ಲೂರ ಮತ್ತಿತರರು ಪಾಲ್ಗೊಂಡಿದ್ದರು.