ಕವಿತಾಳ: ಪಟ್ಟಣದ ತ್ರಯಂಭಕೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಅತಿಕ್ರಮಿತ ಗಾಂವಠಾಣಾ ಭೂಮಿಯ ತೆರವಿಗೆ ಒತ್ತಾಯಿಸಿ ದಲಿತ ಸಂಘಟನೆಗಳು ಅನಿರ್ದಿಷ್ಟ ಅವಧಿ ಪ್ರತಿಭಟನೆಯನ್ನು ಸೋಮವಾರ ಆರಂಭಿಸಿದವು.
ದಲಿತ ಪ್ರಗತಿಪರ ಸಂಘಟನೆಗಳ ಹೆಸರಿನಲ್ಲಿ ಪ್ರತಿಭಟನೆಗೆ ಮುಂದಾಗಿರುವ ವಿವಿಧ ದಲಿತ ಸಂಘಟನೆಗಳು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಧರಣಿ ಆರಂಭಿಸಿವೆ.
ಇಲ್ಲಿನ ದ್ಯಾವಮ್ಮನ ಗುಡಿ ಹತ್ತಿರ ಅಕ್ರಮವಾಗಿ ಕಟ್ಟಡ ಸೇರಿದಂತೆ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ ಆದರೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಅವಶ್ಯವಿರುವ ಕೇವಲ 25 ಚದುರ ಅಡಿ ಸ್ಥಳಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು ಎಂದು ಸಂಘಟನೆ ಮುಖಂಡರು ಆರೋಪಿಸಿದರು.
ಒಟ್ಟು ಅತಿಕ್ರಮಿತ 27 ಎಕರೆ ಸರ್ಕಾರಿ ಭೂಮಿಯನ್ನು ತರೆವುಗೊಳಸಬೇಕು ಎಂದು ಒತ್ತಾಯಿಸಲಾಯಿತು. ಅತಿಕ್ರಮಿತ ಸರ್ಕಾರಿ ಜಾಗೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ದಲಿತ ಸಂಘಟನೆಯ ಅಂಬೇಡ್ಕರ್ವಾದ ಜಿಲ್ಲಾ ಸಂಚಾಲಕ ದುರುಗಪ್ಪ ಮ್ಯಾಗಳಮನಿ, ಗ್ರಾಮ ಪಂಚಾಯಿತಿ ಸದಸ್ಯ ಹುಚ್ಚಪ್ಪ ವಡವಟ್ಟಿ, ಹನುಮಂತ ಬುಳ್ಳಾಪುರ, ಈರಣ್ಣ ಕೆಳಗೇರಿ, ಬಸ್ಸಪ್ಪ ಮ್ಯಾಗಳಮನಿ, ರಾಮಣ್ಣ ಮ್ಯಾಗಳಮನಿ, ಅಲ್ಲಮಫ್ರಭು, ಓವಣ್ಣ, ವೆಂಕಟೇಶ ಮುರಾರಿ, ಹರಳಪ್ಪ, ಪ್ರಾಂಚ್, ರವಿ ಮತ್ತು ಹೆಚ್.ಬಸವರಾಜ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಹೆಚ್ಚುವರಿ ಪೊಲೀಸ್ ಪಡೆ ನೇಮಿಸಲಾಗಿದ್ದು, ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಡಪ್ಪಿನ ನೇತೃತ್ವದಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪಂಚಾಯಿತಿ ಪಿಡಿಒ ಮತ್ತು ಉಪ ತಹಸೀಲ್ದಾರರಿಗೆ ಮನವಿ ಸಲ್ಲಿಸಲು ನಿರಾಕರಿಸಿ ಧರಣಿ ಮುಂದುವರಿಸಲಾಗಿದೆ.