ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ಧರಣಿ

Last Updated 5 ಜುಲೈ 2013, 9:27 IST
ಅಕ್ಷರ ಗಾತ್ರ

ಮೈಸೂರು: ಅತಿಥಿ ಉಪನ್ಯಾಸಕರಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಂಘದ ಸದಸ್ಯರು ನಗರದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

2012-13ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಗಳಲ್ಲಿ 4ರಿಂದ 10 ಗಂಟೆಗಳ ಅವಧಿವರೆಗೆ ಕಾರ್ಯಭಾರ ನಿರ್ವಹಿ ಸುತ್ತಿದ್ದ ಸಾವಿರಾರು ಉಪನ್ಯಾಸಕರಿಗೆ ಇದುವರೆಗೂ ಅನುಮೋದನೆ ನೀಡಿಲ್ಲ.

ಕಳೆದ ಜೂನ್ 26ರಂದು ಸುತ್ತೋಲೆ ಯೊಂದನ್ನು ಸರ್ಕಾರ ಹೊರಡಿಸಿದ್ದು, ಜಂಟಿ ನಿರ್ದೇಶಕರು ಅನುಮೋದನೆ ನೀಡಿದ್ದರೆ ಮಾತ್ರ ಗೌರವಧನ ಕೊಡಿ ಎಂದು ತಿಳಿಸಿದ್ದೀರಿ. ಆದರೆ, ಜಂಟಿ ನಿರ್ದೇಶಕರು ಅನುಮೋದನೆ ನೀಡುವ ಮೊದಲೇ ಕಾರ್ಯಭಾರದ ಎಲ್ಲ ಮಾಹಿತಿಗಳನ್ನು ಕೇಂದ್ರ ಕಚೇರಿಗೆ ಅನುಮೋದನೆಗೆ ಕಳುಹಿಸಲಾಗಿದೆ. ಸಮಸ್ಯೆಯ ವಾಸ್ತವತೆ ಅರಿಯದೆ ಜಂಟಿ ನಿರ್ದೇಶಕರ ತಲೆಗೆ ಕಟ್ಟಲಾಗಿದೆ ಎಂದು ಆರೋಪಿಸಿದರು.

ಈ ಸಂಬಂಧ ಉನ್ನತ ಶಿಕ್ಷಣ ಸಚಿವರು ನಗರಕ್ಕೆ ಆಗಮಿಸಿದ್ದಾಗ ಸಮಸ್ಯೆ ಮನವರಿಕೆ ಮಾಡಿಕೊ ಟ್ಟಿದ್ದೆವು. ಇದಕ್ಕೆ ಸ್ಪಂದಿಸಿದ ಸಚಿವರು, ಅಧಿಕಾರಿಗೆ ಕರೆ ಮಾಡಿ 2012-13ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ ಎಲ್ಲ ಅತಿಥಿ ಉಪನ್ಯಾಸಕರಿ ಅನುಮೋದನೆ ಮಾಡಿ ಗೌರವಧನ ಬಿಡುಗಡೆಗೆ ಮಾಡಬೇಕು ಎಂದು ಸೂಚಿಸಿದ್ದರು. ಆದರೂ, ಸಚಿವರ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ದೂರಿದರು.

ಸಂಘದ ಅಧ್ಯಕ್ಷ ಕೆ. ಪ್ರದೀಪ್‌ಕುಮಾರ್, ಉಪಾಧ್ಯಕ್ಷ ಆರ್. ರಾಮಣ್ಣ, ಪ್ರಧಾನ ಕಾರ್ಯದರ್ಶಿ ಸಿ.ವಿ. ಶ್ರೀನಿವಾಸ್, ಖಜಾಂಚಿ ವೈ.ಸಿ. ಪ್ರಭುಶಂಕರ ಧರಣಿಯಲ್ಲಿ ಇದ್ದರು.

`ಉಪನ್ಯಾಸಕರಿಗೆ ಮಾಸಿಕ 15 ಸಾವಿರ ಸಂಬಳ ಕೊಡಿ'
ಮೈಸೂರು:
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಯಮದಂತೆ ಅತಿಥಿ ಉಪನ್ಯಾಸಕರಿಗೆ ಮಾಸಿಕ ಕನಿಷ್ಠ 15 ಸಾವಿರ ರೂಪಾಯಿ ಸಂಬಳ ನೀಡಬೇಕು ಎಂದು ಮೈಸೂರು ಕಾಳಜಿಯುಳ್ಳ ಮತ್ತು ಮಾಹಿತಿಯುಳ್ಳ ನಾಗರಿಕರ ಸಂಘದ ಸಂಚಾಲಕ ಎಂ.ಲಕ್ಷ್ಮಣ ಆಗ್ರಹಿಸಿದರು.

ಗುರುವಾರ ಎಂಜಿನಿಯರ್ಸ್‌ ಸಂಸ್ಥೆಯಲ್ಲಿ ನಡೆದ ಅತಿಥಿ ಉಪನ್ಯಾಸಕರ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, `ಈ ಬಾರಿ ಅತಿಥಿ ಉಪನ್ಯಾಸಕರ ನೇಮಕಾತಿ ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಿರುವುದರಿಂದ ಪಾರದರ್ಶಕತೆಯಿಂದ ಕೂಡಿದೆ.

ಇದು ಸ್ವಾಗತಾರ್ಹ. ಆದರೆ, 4 ಕಾಲೇಜುಗಳ ಆಯ್ಕೆಗೆ ಅವಕಾಶವಿದ್ದರೂ ಯಾವ ಕಾಲೇಜಿನಲ್ಲಿ ಅವಕಾಶ ಸಿಗುತ್ತದೆ ಎಂಬ ಆತಂಕದಲ್ಲಿ ಉಪನ್ಯಾಸಕರು ಇದ್ದಾರೆ. ಈ ನೇಮಕಾತಿ ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗುತ್ತದೆಯೋ ಅಥವಾ ಪ್ರಾಚಾರ್ಯರು, ಜಂಟಿ ನಿರ್ದೇಶಕರ ಮಟ್ಟದಲ್ಲಿ ಆಗುತ್ತದೆಯೋ ಎಂಬ ಸ್ಪಷ್ಟತೆಯಿಲ್ಲ' ಎಂದು ಹೇಳಿದರು.

`ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳೂ ಸಂಬಳ ನೀಡಬೇಕು. 25 ಸಾವಿರ ಸಂಬಳ ನೀಡಬೇಕು ಎಂಬ ಯುಜಿಸಿ ನಿಯಮವಿದ್ದರೂ 8 ಅಥವಾ 10 ಸಾವಿರ ಸಂಬಳ ನೀಡಲಾಗುತ್ತಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಕನಿಷ್ಠ ರೂ 15 ಸಾವಿರ ನೀಡಬೇಕು' ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಮೈಸೂರು ವಿವಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ನಾಗಾರ್ಜುನ, ಕಾರ್ಯದರ್ಶಿ ಕುಮಾರ್, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಜಿ.ವಿ. ರಮೇಶ್,ಗಣೇಶ್, ಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT