ಸುರಪುರ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಾಗಿ ಸರ್ಕಾರದ ಆದೇಶದಂತೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ. ವ್ಹಿ. ಕೆಂಪರಂಗಯ್ಯ ನೇತೃತ್ವದ ಆಯ್ಕೆ ಸಮಿತಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಶುಕ್ರವಾರ ತಾತ್ಕಾಲಿಕ ಪಟ್ಟಿ ಪ್ರಕಟಿಸಿದೆ.
ನೂರಾರು ಸಂಖ್ಯೆಯಲ್ಲಿದ್ದ ಅಭ್ಯರ್ಥಿಗಳು ಶುಕ್ರವಾರ ಆಯ್ಕೆ ಪಟ್ಟಿ ನೋಡಲು ಕಚೇರಿ ಮುಂದೆ ಜಮಾಯಿಸಿದ್ದರು. ಸಂಜೆವರೆಗೂ ಆಯ್ಕೆ ಪಟ್ಟಿ ಪ್ರಕಟವಾಗದಿರುವುದಕ್ಕೆ ಆತಂಕಗೊಂಡರು. ಕೊನೆಗೂ ತಾತ್ಕಾಲಿಕ ಪಟ್ಟಿಯನ್ನು ಕಚೇರಿ ನಾಮಫಲಕದಲ್ಲಿ ಲಗತ್ತಿಸಲಾಯಿತು.
ಪ್ರಾಥಮಿಕ ಶಾಲೆಗೆ 552 ಮತ್ತು ಪ್ರೌಢಶಾಲೆಗೆ 220 ಅರ್ಜಿಗಳು ಬಂದಿದ್ದವು. ಸರ್ಕಾರದ ಆದೇಶದಂತೆ ಮೆರಿಟ್ ಆಧಾರದ ಮೇಲೆ ಪ್ರಾಥಮಿಕ ಶಾಲೆಗೆ 260, ಪ್ರೌಢಶಾಲೆಗೆ 10 ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಅಭ್ಯರ್ಥಿಗಳು ಶನಿವಾರ (ಸೆ. 7) ಮಧ್ಯಾಹ್ನ 3 ಗಂಟೆಯೊಳಗೆ ತಮ್ಮ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಸೆ. 10 ರಂದು ಕೌನ್ಸಿಲಿಂಗ್ ಮೂಲಕ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ. ವಿ. ಕೆಂಪರಂಗಯ್ಯ ತಿಳಿಸಿದ್ದಾರೆ.