ಹೊಸಪೇಟೆ: ‘ಕೃಷಿ ತಂತ್ರಜ್ಞಾನ ಕಲಿಕೆಯ ಆಸಕ್ತಿಯ ಕೊರತೆ ಹಾಗೂ ಅತಿಯಾದ ಫಲಾಪೇಕ್ಷೆಯಿಂದ ಕೃಷಿ ಕ್ಷೇತ್ರವು ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ. ಶ್ರೀಪಾದ ಕುಲಕರ್ಣಿ ವಿಷಾದ ವ್ಯಕ್ತಪಡಿಸಿದರು.
ಭಾನುವಾರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮತ್ತು ಇನ್ನರ್ ವ್ಹೀಲ್ ಕ್ಲಬ್, ರೇಷ್ಮೆ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಸಹಯೋಗದಲ್ಲಿ ‘ರೈತ ದಿನಾಚರಣೆ’ ಅಂಗವಾಗಿ ‘ಯುವಕರ ಚಿತ್ತ ಕೃಷಿಯತ್ತ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹಳ್ಳಿ ಮತ್ತು ಪಟ್ಟಣಗಳಲ್ಲಿ ಸೌಲಭ್ಯಗಳು ಮತ್ತು ಸಂಪನ್ಮೂಲಗಳ ತಾರತಮ್ಯದಿಂದಾಗಿ ಯುವ ಜನತೆ ನಗರಗಳತ್ತ ಮುಖ
ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿರುವ ಶೇಕಡಾವಾರು ಯುವ ಜನತೆ ಆನಾರೋಗ್ಯ ಅವಿದ್ಯಾವಂತರುಗಳಿಂದ ತುಂಬಿಕೊಳ್ಳುತ್ತಿವೆ, ಉತ್ತಮ ನೈಸರ್ಗಿಕ ಸಂಪನ್ಮೂಲ, ಋತುಮಾನ, ವಿವಿಧ ಬಗೆಯ ಫಲವತ್ತಾದ ಮಣ್ಣನ್ನು ಹೊಂದಿದ್ದರು ಕೃಷಿ ಪ್ರಗತಿ ಕಾಣದಂತಾಗುತ್ತಿದೆ, ಈ ಪರಿಣಾಮ ಕೇವಲ ಪ್ರಕೃತಿಯ ಮೇಲಷ್ಟೆ ಅಲ್ಲದೆ, ಜನಜೀವನದಲ್ಲಿಯೂ ಹಲವಾರು ವೈಪರೀತ್ಯಗಳುಂಟಾಗಲು ಕಾರಣವಾಗಿದೆ ಎಂದರು.
ಪರಿಹಾರ: ವಿದ್ಯಾವಂತರು ಕೃಷಿಯತ್ತ ಮುಖ ಮಾಡವಂತೆ ಮಾಡುವುದು, ವೈಜ್ಞಾನಿಕ ಆಧಾರದಲ್ಲಿ ಬೇಸಾಯ ಕ್ರಮಗಳನ್ನು ಅನುಸರಿಸುವುದು, ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಸಾವಯುವ ಗೊಬ್ಬರದ ಬಳಕೆ, ಸಮರ್ಪಕವಾದ ನೀರಿನ ನಿರ್ವಹಣೆ, ಅವಶ್ಯಕತೆಯಿರುವ ಆಹಾರ ಬೆಳೆ ಬೆಳೆಯುವುದು, ಮಧ್ಯವರ್ತಿಗಳ ಕಾಟವನ್ನು ತಪ್ಪಿಸುವುದು, ಲಾಭದಾಯಕ ವಾಣಿಜ್ಯ ಬೆಳೆಗಳಾದ ಮಸಾಲೆ, ಹಣ್ಣು- ತರಕಾರಿಗಳನ್ನು ಹೆಚ್ಚಾಗಿ ಬೆಳೆಯುವುದು ಅವಶ್ಯಕವಾಗಿದೆ ಎಂದು ಕುಲಕರ್ಣಿ ತಿಳಿಸಿದರು.
ಕಾರ್ಯಾಗಾರ ಉದ್ಘಾಟಿಸಿದ ಹೊಸಪೇಟೆಯ ರಾಮಕೃಷ್ಣಾಶ್ರಮದ ಸುಮೇದಾನಂದ ಸ್ವಾಮೀಜಿ ಶುಭಕೋರಿದರು. ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸರಾವ್ ಅಧ್ಯಕ್ಷತೆ ವಹಿಸಿದ್ದರು.
ರೈತ ಸಂಘದ ಅಧ್ಯಕ್ಷ ತಾರಳ್ಳಿ ಹುಲುಗಪ್ಪ, ಗುಜ್ಜಲ ಶಿವರಾಮ, ಕೊಪ್ಪಳದ ಪ್ರಗತಿಪರ ಕೃಷಿಕರಾದ ಮಲ್ಲಿಕಾರ್ಜನ ಗಡಗಿ, ಎಂ.ವಿ. ಪಾಟೀಲ, ಕಾರ್ಯದರ್ಶಿ ಸೈಯದ್ ಮೊಹಮ್ಮದ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷ ಡಾ. ಮಾಧವಿ, ಕಾರ್ಯದರ್ಶಿ ಮೇಘನಾ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಹಿರಿಯ ನಿರ್ದೇಶಕ ಗುರುಮೂರ್ತಿ, ಕಮಲಾಪುರದ ಕೃಷಿ ಅಧಿಕಾರಿ ಅರ್ಚನಾ, ರೇಷ್ಮೆ ಇಲಾಖೆಯ ಪದ್ಮನಾಭ, ಮೀನುಗಾರಿಕೆ ಅಭಿವೃದ್ಧಿ ಇಲಾಖೆಯ ಎ.ಟಿ. ಪುರಾಣಿಕ, ಬಸವನಗೌಡ, ಪಶು ವೈದ್ಯಾಧಿಕಾರಿ ಮಹಾದೇವಪ್ಪ ರಾಜ್ಯ ರೈತ ಸಂಘದ ಕಾರ್ಯದರ್ಶಿ ಖಾಜಾ ಹುಸೇನ್ ನಿಯಾಜಿ ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಹಲವು ಪ್ರಗತಿಪರ ರೈತರು ತಮ್ಮ ಅನುಭವ ಹಂಚಿಕೊಂಡರು, ಶಾಲಾ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯನ್ನು ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.