ನವದೆಹಲಿ (ಪಿಟಿಐ): ಇಡೀ ದೇಶದ ಜನರನ್ನೇ ತಲ್ಲಣಗೊಳಿಸಿದ್ದ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಒಂದು ತಿಂಗಳು ಸಂದ ಹಿನ್ನೆಲೆಯಲ್ಲಿ ಬುಧವಾರ, ನೂರಾರು ಜನರು ಜಂತರ್ ಮಂತರ್ನಲ್ಲಿ ಸೇರಿ 23ರ ಹರೆಯದ ವಿದ್ಯಾರ್ಥಿನಿ ನೆನಪಲ್ಲಿ ಮೋಂಬತ್ತಿ ಬೆಳಗಿಸಿದರು.
ಕೈಯಲ್ಲಿ ಮೋಂಬತ್ತಿ ಹಿಡಿದು ಜಂತರ್ ಮಂತರ್ನಿಂದ ಮೆರವಣಿಗೆಯಲ್ಲಿ ಸಂಸತ್ಭವನದ ಹಾದಿಯತ್ತ ಸಾಗಿದ ಜನರನ್ನು ತಡೆಯಲಾಯಿತು. ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿ ಈ ಸಂದರ್ಭದಲ್ಲಿ ಹಾಜರಿದ್ದರು. ಪ್ರಕರಣದಲ್ಲಿ ನ್ಯಾಯ ದೊರಕುವವರೆಗೆ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಎಐಡಿಡಬ್ಲ್ಯೂಎ ಆರೋಪ: ದೆಹಲಿ ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಅಖಿಲ ಭಾರತ ಪ್ರಜಾಪ್ರಭುತ್ವವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ) ಆರೋಪಿಸಿದೆ.
ವಿದ್ಯಾರ್ಥಿನಿಯ ಕುಟುಂಬಕ್ಕೆ ಹಾಗೂ ಆಕೆಯ ಸ್ನೇಹಿತನಿಗೆ ಸರ್ಕಾರ ಎಲ್ಲಾ ರೀತಿಯ ನೆರವನ್ನು ನೀಡಬೇಕೆಂದು ಸಂಘಟನೆ ಒತ್ತಾಯಿಸಿದ್ದು ಪ್ರಕರಣದ ಕುರಿತು ತ್ವರಿತಗತಿಯಲ್ಲಿ ತನಿಖೆ ನಡೆಸಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂದು ಕೋರಿದೆ.